Tuesday, July 26, 2016

ಆ ಹಾದಿಯಲಿ..

೨. ಆ ಹಾದಿಯಲಿ..

ಕೇಕೆಯ ಹಾಕಿ
ಧೂಳು ಎಬ್ಬಿಸಿವೆ
ಕಾಣುವ ದಾರಿಗಳೆಲ್ಲ
ಅದೇ ಹಳೆಯ ಊರ
ದಾರಿಯಲಿ ದಾರಿಹೋಕರ
ಹೆಜ್ಜೆಗಳು ಕೂಡಿ ತನ್ನವರ
ಹಾದಿಯ ಹುಡುಕುವ
ಕಿಂಚಿತ್ತು ಆಸೆಯೂ ಉಳಿದಿಲ್ಲ.

ಯೌವನದ ಇಳಿಕೆಯ ಕಾಲ
ಬೇಲಿಯ ಸಾಲು ಸಾಲು
ಬಳ್ಳಿಯ ಹೆಸರುಗಳು ಮರೆತು
ಬಣ್ಣಗಳ ಚಂದ ಕಳೆದಾಗ
ಮುಳ್ಳುಗಳು ಗೋಚರಿಸಲು
ಒಡಲ ಕಾಡುವ ಪರಿಮಳಕೆ
ಯಾರೋ ಇಟ್ಟ ಹೆಸರ ನೆನಪಿಲ್ಲ.

ಇರುಳ ನೀರವತೆಯಲಿ
ಕಾಡುವ ಬದುಕು
ಬೆಳಗಿನ ಬಯಲಲಿ
ಹೊಂಚು ಹಾಕುತ್ತಿದೆ
ನಿದ್ದೆಗೆ ಜಾರಲು!
             -ಎಚ್.ಎನ್.ಈಶಕುಮಾರ್

Monday, January 25, 2016

ಸಾವು-ಸ್ಪಂದನೆ-ಗೊಂದಲ.

ಸಾವು-ಸ್ಪಂದನೆ-ಗೊಂದಲ.
ಇಂದು ಕೆಲವರ ಸಾವಿಗೆ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ  ವ್ಯಕ್ತವಾಗುತ್ತಿರುವ ಪರ ವಿರೋಧಗಳ ಕೇಳಿ,ಓದಿ ತಿಳಿಯುವ ಹೊತ್ತಿಗೆ ಅದರ ಮೂಲ ವಿಷಯವೇ ಮರೆತು ಹೋಗಿ ವಿಚಿತ್ರ ಸಂದಿಗ್ಧತೆ ಎದುರಾಗುವುದು. ಇಲ್ಲಿ ಪ್ರತಿ ವಿಚಾರವು ಎಡ-ಬಲ,  ಹಿಂದುತ್ವ, ಮುಸ್ಲಿಂ,ಅಭಿವೃದ್ಧಿಪರ, ದಲಿತಪರ, ಪ್ರಗತಿಪರ, ಪ್ರಾದೇಶಿಕವಾದ, ರಾಷ್ಟ್ರೀಯತೆ ಹೀಗೆ ಇನ್ನೂ ಹಲವಾರು ಸಂಕೀರ್ಣತೆಗಳ ನಡುವೆ ನಮ್ಮ ಮಾನವೀಯ ಮೌಲ್ಯಗಳನು ಯಾವ ರೀತಿ ಸಮಷ್ಟಿಗೆ ನಿಲುಕುವಂತೆ ನಿರೂಪಿಸುವುದು ಎಂಬುದೇ ತಿಳಿಯದ ಅತಂತ್ರ ಪರಿಸ್ಥಿತಿ.
ಸಾಹಿತಿಯ ಸಾವಿನ ತನಿಖೆಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಕೆಲವು ಸಾಹಿತಿಗಳು, ಪತ್ರಕರ್ತರು, ಚಿಂತಕರು ತಮಗೆ ದೊರೆತ ಪ್ರಶಸ್ತಿಗಳನ್ನು ಹಿಂದುರುಗಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಒಂದು ಘಟನೆಗೆ ಸ್ಪಂಧಿಸುವ  ಮನಸುಗಳು ಆ ಘಟನೆಯ ತೀವ್ರತೆಯನ್ನು ಅರಿತು ತಮ್ಮ ಪ್ರತಿಕ್ರಿಯೆಯನ್ನು, ಪ್ರತಿಭಟನೆಯನ್ನು ನೀಡುತ್ತ ಬಂದಿರುವುದು ತೀರ ಸಹಜ ಮತ್ತು ಸಾಮನ್ಯ. ಅದು ಆ ವ್ಯಕ್ತಿಗಳು ಅಹಿತಕರ ಘಟನೆಯನ್ನು ವಿರೋಧಿಸುವ ಮೌಲ್ಯಯುತ ನಡೆ, ಅದು ಅವರ ಅಭಿವ್ಯಕ್ತಿ ಸ್ವಾತಂತ್ರವು ಕೂಡ.

ಸಾಹಿತಿಯ ಸಾವಿಗೆ ಸ್ಪಂದಿಸುವ ಬುದ್ದಿಜೀವಿಗಳು, ಚಿಂತಕರು, ರೈತನ ಸಾವಿಗಾಗಲಿ,ಒಬ್ಬ ನಿಷ್ಠ ಅಧಿಕಾರಿಯ ಸಾವಿಗಾಗಲಿ ಏಕೆ ಸ್ಪಂದಿಸುವುದಿಲ್ಲ ? ಎಂಬ ಪ್ರಶ್ನೆಗಳನ್ನು ಸಮಾನಾಂತರವಾಗಿ ನೋಡುವ ಇಂದಿನ ರೀತಿಯೇ ಅಸಂಮಜಸ. ಬಡತನದ ಮೂಸೆಯಲ್ಲಿ ಬೆಂದು ತನ್ನ ಅಸಹಜ ಸಾವನ್ನು ತಂದುಕೊಳ್ಳುವ ಸಾವಿಗೂ, ಕೊಲೆಗೇಡಿಗಳು ಪ್ರಾಣಭಯದಿಂದ ಅಚಾತುರ್ಯವಾಗಿ ಮಾಡುವ ಅನಾಹುತಕು ಸಂಭಂದ ಕಲ್ಪಿಸಿ ನೋಡುವುದೇ ನಮ್ಮೆಲ್ಲರ ನಡುವಿನ ವಿಪರ್ಯಾಸ.
ವೈಯಕ್ತಿಕವಾಗಿ ಹಾಗೂ ತತ್ವದ ವಿಷಯವಾಗಿ ಈ ಎಲ್ಲ ಸಾವಿಗೂ ಒಂದೇ ರೀತಿಯ ಅರ್ಥವಿದೆ.ಜೀವನವ ಕೊನೆಗಾಣಿಸುವ ಈ ಎಲ್ಲ ಸಾವುಗಳಿಗೂ ಮಾನವೀಯ ಮರುಕವಿದೆ, ಅವರ ಬಾಂಧವರ ನೋವಿನ ಅಳಲೂ ಮನವನು ಕಲಕುವಂತದ್ದೆ. ಇಂತಹ ಸಾವಿನಲ್ಲಿ ಜನಪರವಾದೂದು ಯಾವುದು,ಅಲ್ಲದ್ದು ಯಾವುದು ಎಂಬ ಪ್ರಶ್ನೆಯೇ ಅರ್ಥಹೀನ.
ಒಬ್ಬ ಸೂಕ್ಷ್ಮ ಮನಸಿನ ಸಾಹಿತಿಯು ಅಕ್ಷರದ ಮುಖೇನ ಜನರ ಜೀವನ ರೀತಿ, ಸಾಮಾಜಿಕ ಪ್ರಜ್ಞೆಯನು ರೂಪಿಸುವ,ಬೆಳೆಸುವ,  ಎಚ್ಚರಿಸುವ ಮೌಲ್ಯಯುತ ಪ್ರತಿಪಾದನೆಗಳಿಗೆ ನಾವು ಯಾವುದೇ ಮೂರ್ತ ರೂಪದ ನಿದರ್ಶನಗಳನು ನೀಡಲಾಗುವುದಿಲ್ಲ. ಸಾಹಿತಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಇತರರಂತೆ ಕರ್ತವ್ಯದ ಆದರ್ಶ ಪಾಲನೆಗಾಗಲಿ ಮತ್ತೆ ಇತರರನು ಮೆಚ್ಚಿಸಿ ಸೇವೆಯ ಹೆಸರಲ್ಲಿ ಪ್ರಶಸ್ತಿ ಗಿಟ್ಟಿಸುವ ಕಾರಣಕ್ಕಾಗಲಿ ನಿರ್ವಹಿಸಿರುವುದಿಲ್ಲ. ತನ್ನ ಅನುಭವದ ರಸವನ್ನು ಓದುಗರಿಗೆ ನೀಡುವ ಹಂಬಲ ಮಾತ್ರವಿರುವ ಯಾವುದೇ ಬರಹಗಾರನ ಉದ್ದೇಶವು ಸಮಷ್ಟಿಯ ವಿಕಸನವೇ ಹೊರತು, ಕೆಟ್ಟ ಬೆಳವಣಿಗೆಯ ಸಾಧನೆಯಲ್ಲ. ನಿರುಪದ್ರವಿಯಾಗಿ ಯಾವುದೇ ಲಾಭದ ಲವಲೇಶವು ಉಳ್ಳದೆ ತನ್ನ ಕೆಲಸವನ್ನು ಸಾಮಾಜಿಕ ಬೆಳವಣಿಗೆಗಾಗಿ ನಿರ್ವಹಿಸುವ ಬರಹಗಾರ ಎಂದಿಗೂ ಯಾವುದೇ ಸಮಾಜದ ಆದರ್ಶವಾಗಿಯೇ ಉಳಿಯುತ್ತಾನೆ.

ಒಬ್ಬ ರೈತನ ಸಾವಿಗೆ ಮೂಲ ಕಾರಣವಿರುವುದು ನಾವು ವ್ಯವಸ್ಥೆ ಎಂದು ನಂಬಿರುವ ಅವ್ಯವಸ್ಥೆಯಲಿ. ರೈತನ ಶ್ರಮಕ್ಕೆ ಅವನ ಬೆವರಿಗೆ ನಮ್ಮ ಸ್ವಾತಂತ್ರ ಸರ್ಕಾರಗಳು ಇಂದಿಗೂ ನ್ಯಾಯಯುತ ಬೆಲೆಯನು ಒದಗಿಸಲಾಗದ ರೈತ ವಿರೋಧಿ ಸರಕಾರಗಳು. ರೈತರ ಉದ್ದಾರವೇ ನಮ್ಮ ಆದ್ಯ ಕರ್ತವ್ಯವೆಂದು ಅಧಿಕಾರ ಏರಿರುವ ಸರಕಾರಗಳು ಇಲ್ಲಿವರೆಗೂ ಅವನಿಗೆ ಮಾಡಿರುವುದು ಬೆನ್ನಿಗೆ ಚೂರಿ ಹಾಕುವ ಮೀರ್ ಸಾಧಿಕನ ಕೆಲಸ. ರೈತನ ಬದುಕಿಗೆ ಆತ್ಮಸ್ಥೆರ್ಯ ತುಂಬದ ಒಣಗೇಡಿ ಸಮಾಜವೂ ಸಹ ಅವನ ಸಾವಿಗೆ ಕಾರಣವಾಗಿರುವಾಗ ಇಲ್ಲಿ ಎಲ್ಲರು ತಪ್ಪಿತಸ್ಥರೆ. ಆದರೆ ಯಾರು ಸಹ ತಮ್ಮ ತಪ್ಪಿನ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ, ಅದನ್ನು ಒಪ್ಪಲು ಸಹ ಮನವಿಲ್ಲದ ರೋಗಿಷ್ಟರಿರುವ ಸಮಾಜದ ಜೀವಿಗಳು.
ಇಂತವರಿಂದ ತುಂಬಿರುವ ನಮ್ಮ ಇಂದಿನ ಸಮಾಜ ಎಂತಹ ತಿರುವಿನಲಿ ನಿಂತಿದೆ ಎಂಬುದೇ ಘಾಸಿಯಾಗುವ ವಿಷಯವಾಗಿದೆ. ಯಾರಿಗೂ ಯಾವ ಸೂಕ್ಷ್ಮತೆಯ ಬಗ್ಗೆಯೂ ಸಾವಧಾನವಾಗಲಿ, ಸಹಿಷ್ಣುತೆಯಾಗಲಿ ಇಲ್ಲವೇ ಇಲ್ಲ. ಜನರ ಕ್ರಿಯೆಗಳಿಗೆ ಪ್ರತಿಕ್ರಿಯೆಯೂ ಅವನು ಯಾವ ಜಾತಿ, ಧರ್ಮ, ಸಂಘ, ರಾಜಕೀಯ ಪಕ್ಷಗಳ ಬೆಂಬಲಿಗ ಎನ್ನುವುದರ ಮೇಲೆ ಅವಲಂಬಿತವಾಗಿದೆ.  ಮುಸ್ಲಿಂನಾಗಿದ್ದರೆ ಹಿಂದೂಗಳು ವಿರೋದಿಸಲೇಬೇಕು, ಆರ್ ಎಸ್ ಎಸ್ ನವರನ್ನು ಕಾಂಗ್ರೆಸ್ಸಿಗರು,ಪ್ರಗತಿಪರರು ವಿರೋಧಿಸಲೇ ಬೇಕು, ಕಾಂಗ್ರೆಸ್ಸಿಗರನ್ನು ಬಿಜೆಪಿಯವರು, ಸಂಘ ಪರಿವಾರದವರು ವಿರೋಧಿಸಲೇಬೇಕು, ಕೆಳವರ್ಗದವರನ್ನು ಮೇಲ್ಜಾತಿಯವರು ವಿರೋಧಿಸುವ "ವಿರೋಧಕ್ಕಾಗಿಯೇ ವಿರೋಧ ಎನ್ನುವ ನೀತಿ" ಇಂದಿನದಾಗಿದೆ. ಈ ಎಲ್ಲ ಹಾರಾಟ-ಚೀರಾಟಗಳ ನಡುವೆ ಮಾನವೀಯ ಮೌಲ್ಯಗಳು ಕೊಚ್ಚೆ ರಾಡಿಯಲಿ ಕೊಚ್ಚಿಹೋಗಿವೆ.  ನಾವು ಯಾವ ಸೂಕ್ಷ್ಮತೆಗಳನ್ನು ಅರಿಯಬೇಕು ಎಂಬುದೇ ಗೊಂದಲ.  ಆ ಅರಿವು ಮೂಡಿಸುವವರು ಯಾರು ಮೂಡಿಸುವವರಲ್ಲಿ ಯಾರನ್ನು ನಾವು ಅನುಕರಿಸಬೇಕು ಎಂಬುದೇ ತಿಳಿಯದ ತ್ರಿಶಂಕು ಸ್ಥಿತಿಯಲ್ಲಿದೆ ನಮ್ಮ ಸಮಾಜ. ಆ ಸೂಕ್ಷ್ಮತೆಯನ್ನು ಕಳೆದುಕೊಂಡು ಅಸಹಜ ಬೆಳವಣಿಗೆಯಲ್ಲಿ ಇತರರನ್ನು ಹಿಯಾಳಿಸುವ, ಅವಮಾನಿಸುವ,ಹಿಂಸಿಸುವ ದಾರಿಯಲಿ ಸಾಗಿದೆ ಪ್ರಜ್ಞೆ ಕಳೆದುಕೊಂಡ ಸಮಾಜ.

ತಾನಿರುವ ಪ್ರಕೃತಿಯಲಿ ಎಲ್ಲವು ಸಮ್ಮಿಳಿತವಾಗಿವೆ, ಸಮಾಜವು ಎಲ್ಲ ಸೂಕ್ಷ್ಮ ವರ್ಗಗಳನ್ನು ಒಳಗೊಂಡ ಸಮಗ್ರ ತಾಣ. ಇಲ್ಲಿ ಸಾತ್ವಿಕವಾದ ಎಲ್ಲ ಆಚಾರ ವಿಚಾರಗಳಿಗೂ, ನಡೆ ನುಡಿ, ಸಂಸ್ಕೃತಿ, ಸಂಸ್ಕಾರಗಳಿಗೂ ಅವಕಾಶವಿದೆ ಎಂಬ ಅಗಾಧವಾದ ಸಾಮಾನ್ಯ ಸತ್ಯವನ್ನು ಪ್ರತಿ ಜೀವಿಯು ತಿಳಿಯುವ ವರೆಗೂ ಇಲ್ಲಿಯ ಸಾಹಿತಿಯ, ಸಮಾಜ ಸೇವಕನ, ರೈತನ,ಅಧಿಕಾರಿಯ ಸಾವಿಗೆ ಹೀಗೆ ಯಾರ ಸಾವಿಗೆ ಆಗಲಿ ಮಾನವೀಯ ಸ್ಪಂದನೆಗಳು ದೊರೆಯುವುದೇ ದುಸ್ತರ.
 ಇಂತಹ ಸಂಧಿಗ್ಧತೆಯ ನಡುವೆ ಸಾಮಾಜಿಕ ಪ್ರಜ್ಞೆ, ನ್ಯಾಯ, ಸಮಾನತೆ ಎಂಬುದೆಲ್ಲ ಭ್ರಮೆಯೇ..?
                  - ಎಚ್.ಎನ್.ಈಶಕುಮಾರ್

Tuesday, November 17, 2015

ಚರಿತ್ರೆಯ ಪುಟವೆಲ್ಲ..

ಚರಿತ್ರೆಯ ಪುಟವೆಲ್ಲ 
ಜೀವ ಪಡೆದವು ಒಮ್ಮೆಗೆ 
ತನ್ನೊಳಗೆ ಅಮರರಾಗಿದ್ದ 
ರಾಜರ ಮಹಾಮಹಿಮರ 
ಹೆಸರನೆಲ್ಲ ಕಾಪಾಡಿಕೊಂಡು 

ಗರ್ಭ ತುಂಬಿದ ಅವರ 
ಕೀರ್ತಿ ಅಪಕೀರ್ತಿಗಳೆಲ್ಲ 
ಉಸಿರು ಕಟ್ಟಿ ಯಾವುದೋ 
ದಿವ್ಯ ಗಳಿಗೆಯಲಿ ಪ್ರಸವವಾಗಿ 
ಗತದ ಗೊಂದಲವೆಲ್ಲ ಹರಿದಾಗ 
ಉತ್ತರ ದಕ್ಷಿಣ ಎಡ ಬಲಗಳ ವೈರುಧ್ಯ

ಹಾರಾಡಿ ಚಿರಾಡುತ ಶಪಿಸಿ 
ಹುತಾತ್ಮನ ಹೆಸರ ಕೂಗಲು  
ಹತನಾದನು ಇವನು ಇಲ್ಲಿ  
ನೋವಿನಲಿ ಸಾವಿನಲಿ 
ಹರಿಯಲು ಯಾರದೋ ರಕ್ತ 
ನಾಳೆಯ ಇತಿಹಾಸದ,,,,,,, 
ಪುಟಗಳೆಲ್ಲ ಕೆಂಪು.          
              - ಈಶಕುಮಾರ್

Tuesday, September 15, 2015

ಊರ ಓಣಿಯಲಿ..


ಊರ ಓಣಿಯಲಿ..

 ಮುಸ್ಸಂಜೆಯಲಿ
 ಜಿದ್ದಿಗೆ ಬಿದ್ದು
ಮಳೆ ಸುರಿಯಲು
ಊರ ಓಣಿಯ ತುಂಬಾ
ಕೆಂಪನೆ ರಂಗು
ಚುಕ್ಕಿ ಇಡದೇ
ರಂಗೋಲಿ ಹಾಕಿದೆ

 ಮುಂಜಾವಿನಲಿ
ಮೆಲ್ಲನೆ ನಡೆದ
ಓಣಿಯ ಆಕಳು
ಹಿಂದೆ ಚಿಗಿವ
ಆಕಳ ಕರುವಿನ
ಹೆಜ್ಜೆ ಗುರುತಿಗೆ
ಕೈಯೂರಿ ಕೂತ
ಅವ್ವನ ಸೆರಗ ಸ್ಪರ್ಶ

ಇರುಳಲಿ
ಊರ ತುಂಬಿದ
ಒರೆ ಕೋರೆಗಳ ದಾಟಿ
ಆಚೆಗಿನ ಬಯಲಲಿ
ಊರ ಕೆರೆಯ ಒಡಲ
ತುಂಬಿದ ನೀರಲಿ
ಬೀದಿಯ ಕಳೆಯೆಲ್ಲ
ಹೂಳಾಗಿ ತಳಸೇರಿದ
ಹೊತ್ತಿಗೆ ದಂಡೆಯಲಿ
ಸುಳಿದಾಡುತ್ತಿವೆ
ಬಾಯರಿದ ಒಡಲು..!
     -ಎಚ್. ಎನ್. ಈಶಕುಮಾರ್

Thursday, May 14, 2015

ಉಳಿದ ಮುಸ್ಸಂಜೆಯ ಹಾದಿ..

ಉಳಿದ ಮುಸ್ಸಂಜೆಯ ಹಾದಿ...
ಮುಸ್ಸಂಜೆಯ ಇಬ್ಬಂದಿತನ
ಅರೆ ಬಿರಿದ ಮೊಗ್ಗು
ಕವಿದ ಕಾರ್ಮೋಡವ
ಒಲ್ಲದ ಮನಸಲ್ಲಿ
ಸೀಳುವ ಸೂರ್ಯ

ಕತ್ತಲ ಕೊಲ್ಲದ
ಬೆಳದಿಂಗಳ ಚೆಲುವು
ತನ್ನ ಇರುವ
ಮುಸುಕಲೆ ತೋರುವ
ಚುಕ್ಕೆಗಳ ರಾಶಿ

ಹಡೆದ ದಡವನು
ಮೀರುವ ತವಕದಲೆ
ಸೋಲುವ ತೊರೆಯ ಓಟ
ಗರಿಕೆಯ ದಾಹವನು
ನೀಗದ ಇಬ್ಬನಿಯ ಒರಸೆ

ಯಾರ ನೋವಿಗೂ
ಕೈಗನ್ನಡಿಯಾಗದ
ಸ್ನಿಗ್ಧ ಚೆಲುವೆಯರ ಮುಗುಳ್ನಗೆ
ಹಸಿದೂರಿನ ಬವಣೆ
ಕಳೆಯದ ಕಾಣದ ಕೈಯ
ಮಮಕಾರ
ಭರವಸೆಯ ನಾಳೆಗಳ
ಹುಡುಕಿ ಮಬ್ಬಾಗಿಹ
ಕಂಗಳಲಿ ಉಳಿದ 
ಮುಸ್ಸಂಜೆಯ ಹಾದಿ...
     -ಈಶ



Sunday, March 29, 2015

ಕಾಮನ ಬಿಲ್ಲಾಗುವೆ..!


ಕಾಮನ ಬಿಲ್ಲಾಗುವೆ..!

ಬಂದು ಪಕ್ಕದಲ್ಲಿ ಕುಳಿತೆ
 ಮಾತು ಶುರುವಿಟ್ಟುಕೊಂಡಿತು
ಮನ
ಹುಂಬತನ ನಾಚಿಕೆಯ
ಮುಖವಾಡ ಹೊದ್ದು
ಹುಸಿ ನಕ್ಕಿತು
ಚೆಂದದ ಮೊಗವ
ಮತ್ತೆ ಮತ್ತೆ
ಕದ್ದು ನೋಡುವ
ಕಣ್ಣ ಒಳಗೆ
ಇದ್ದು ಬಿಡಬಾರದೇ ನೀನು
ಒರತೆ ನೀಗದೆ
ನದಿ ಹರಿದಿದೆ
ಮುಳುಗುವ ಮಾತಲ್ಲೆ
ಉಳಿದು ಹೋಗಿದೆ
ನಿನ್ನ ಕುರಿತೆ ಹೇಳಬೇಕಿದ್ದ
ನೂರೇ ನೂರು ಸುಳ್ಳುಗಳು...
ಆ ಒರೆ ನೋಟದಲೆ
ಜೀವ ಮಿಡಿಯುತ್ತಿದೆ
ಕಾಮನ ಬಿಲ್ಲಾಗುವೆ
ನೀ ಅನುಮತಿ ಇತ್ತು
ಮರೆತುಬಿಡು ನನ್ನ..!
     -ಈಶ

Tuesday, February 17, 2015

ಬಯಲ ಕರೆದಿದೆ

ಬಯಲ ಕರೆದಿದೆ

ನೂರು ಕಾಲ ಸವೆದು
ಇಂದಿಗೂ ತಣ್ಣಗೆ
ಹರವಿಕೊಂಡು ಬಯಲೆಡೆಗೆ
ಸಾಗಿಹ ಹಾದಿ
ತಿರುವಲಿ ಏಕಾಂತ ಬಯಸಿ
ನಿಂತ ಬದುಕು
ಸಂಧಿಸುವ ಬಿಂದುಗಳ
ಮೇಲೆ ಬಿದ್ದಿಹ
ಬೆವರ ಹನಿಗೆ
ನೆತ್ತರ ಬಣ್ಣ .

ಹರಿದ ಕನಸುಗಳು
ಚರಿತ್ರೆಯ ಭಾಗವಾಗಿ
ಉಸಿರುಕಟ್ಟಿವೆ   

 ಜೀವವೇ ಇಲ್ಲಿ  ಮೈಲಿಗಲ್ಲು
ಮೊದಲು ಕೊನೆಯಿಲ್ಲದ
ಹುಡುಕಾಟಕೆ.

ಅಂಕೆಗೆ ಸಿಗದ ಹೆಜ್ಜೆಗಳು
ಗುರುತನಿರಿಸಿ ಸರಿದಿವೆ
ಹೇಳಲು ಹೆಸರಿಲ್ಲ
ಶೃತಿ,ತಾಳ, ರಾಗ
ದ್ವೇಷಗಳ ಹಂಗಿಲ್ಲದ
ಹಾದಿ - ಬಯಲ ಕರೆದಿದೆ.

ಈಶ

Tuesday, January 13, 2015

ಜಾರಿದ ಹನಿ

 ಜಾರಿದ ಹನಿ

 ಖಾಸ ಕೋಣೆಯ 
ಇಂಚಿಂಚು ಆವರಿಸಿದ 
ಚಳಿಯ ಪ್ರಲಾಪವನು 
ಬೆಚ್ಚಿಸುವ ಹಾಗೆ 
ಎಲ್ಲೇ ಮೀರಿನಿಂತ 
ಮೋಹ !

ಕತ್ತಲ ಕಣ್ಣಲಿ 
ಉನ್ಮಾದದ ಕಾಮನಬಿಲ್ಲು 
ಸಂಗಾತಿಯ ಬಿಸಿಯುಸಿರಲಿ 
ಗರಿಗೆದರಿದ ದಾಹ 
ಬೆತ್ತಲಾದಷ್ಟು ಬಯಕೆ 
ಬೆವರ ಹನಿಯಾಗಿ 
ಮೈ ಜಾರಿದೆ.

ಸ್ಪರ್ಶದ ಪ್ರತಿ ಗೆರೆಯಲು 
ತನುವರಳಿ ಬೆಸೆಯುವ ತವಕ 
ತನ್ಮಯತೆಯ ಜೋಕಾಲಿ 
ಸುಖಿಸಿ ಸೋತ ಜೀವಗಳಲಿ 
ಬೆಳಕು ಹರಿಯಲು 
ಹಿಮದ ಮರೆಯ ಮುಂಜಾವು 
ಚಾದರದಡಿಯ ಆತ್ಮಗಳಿನ್ನೂ 
ನಿಗಿ ಕೆಂಡ !
      -ಈಶ 

Tuesday, December 9, 2014

ಅರೆ ಜೀವ!!

ಅರೆ ಜೀವ!!

ಮಾಗಿಯಾ ಶೀತಕೆ
ಮೈಒಡ್ಡಿದ ಭುವಿ
ಬರಿದಾಗುತ್ತಿರುವ  ತುಂಬಿದ
ಒಡಲ ರಾಶಿ ರಾಶಿ ಚೆಲುವು
ನೆರಳ ಆಶ್ರಯಿಸಿ ಒರಗಿದ
ಜೀವಕೆ ಬಾಯಾರಿಕೆಯ ಕಸಿವಿಸಿ
ಸಾಗಿಬಂದ ದಾರಿಯಲಿ
ಉಳಿದಿಹ ಅರೆಬರೆ
ಹೆಜ್ಜೆ ಗುರುತು
ಹಿನ್ನೋಟಕೆ ಅಂಕೆ ಮೀರುವ
ಹಂಗಿಲ್ಲ
ಮಂಜು ಮುಸುಕಿದೆ
ನಿತ್ಯದ ಜಗದ ಹಾದಿಗೆ...
ವಸಂತಕೆ ಇನ್ನು ಅರೆ ಜೀವ!!
         

Friday, October 31, 2014

ಮರೆತು ಎಲ್ಲವನು...


ಮರೆತು ಎಲ್ಲವನು...

ಸಾಲು ಸಾವಿರ ಮರದ
ತಂಗಾಳಿ ತಂಪಾಗಿ ನಿನ್ನ
ಸೊಬಗಿಗೆ ಸೋತು ಸುಳಿದಾಡಲು
ನಿನ್ನದೊಂದು ಕೊಂಕು ನೋಟಕೆ
ನಲಿದಾಡಿವೆ ಶರತ್ಕಾಲಕೆ
ಹಸಿರಾಗಿ ಮೈದುಂಬಿಹ
ರಾಶಿ ರಾಶಿ ಎಲೆಗಳು.

ಎಲ್ಲವನು ಮರೆತ ಹಾಗೆ
ಕ್ಷಣದಲಿ ಎಲ್ಲವು ಬದಲಾಗಿ
ಮೈದುಂಬಿಹ ಹೊಳೆಯ ರಭಸಕೆ
ಸಿಕ್ಕ ಎಲ್ಲೊ ಉದುರಿದ ಎಲೆಯೂ
ಮೇಲೇರುವ ಪ್ರತಿ ಅಲೆಯಲು
ಪುಳಕಗೊಂಡು ತನ್ನಿರುವ ಮರೆಯಲು
ಚಲನೆಯೊಂದೆ ಜೀವಂತ ತಾನಿರುವಲ್ಲೇ!

ತಡಕಾಡುತ ಹುಡುಕಾಡುವ ಬದುಕು
ನಿಟ್ಟುಸಿರಿಡುವ ಹೊತ್ತಿಗೆ
ಅರಿವಿರದೆ ಕೂಡುವ ನಂಟಿಗೆ
ಯಾವ ಬಂಧದ ಹೆಸರೋ
ಎಲ್ಲದಕು ಕಾರಣವ ತಿಳಿದು ತಿಳಿದು
ನಿರುತ್ತರವಾಗಿಹ ಜೀವಗಳೇ ಇಲ್ಲಿ
ಉಸಿರಾಡುತಿವೆ ಮರೆತು ಎಲ್ಲವನು...


Friday, September 19, 2014

ಮಳೆ ನಿಲ್ಲುವ ಸೂಚನೆಯಿಲ್ಲ...


" ನಿನ್ನ ಕುಂಚಕೆ
 ಮಾತ್ರ ಸಿಗುವ
ಕಾಮನಬಿಲ್ಲು ನಾ.."
&&&&&&&&&&&&&

ನಿನ್ನ ನೆನೆದು
ಕಾಲ ಕಳೆಯುತ ಕೂತೆ
ಹೂ ಅರಳಿ ನಿಂತಿತು
ಹುಸಿ ನಗೆಯ ಸುವಾಸನೆ
ಎಲ್ಲೆಯ ಮೀರಿತ್ತು.
 ##################

ಮುಗಿಲ ಮೇಲೆಲ್ಲಾ ಚೆಲ್ಲಿದೆ
ಗಾಳಿಯಲ್ಲಿ ಹಾಗೆ ತೇಲಿಬಂದ
ಯಾವುದೋ ಹಳೆ ಊರಿನ
ಹೆಸರಿನ ಜೊತೆಗೆ ಜೋತುಬಿದ್ದ
ಸಲ್ಲಾಪದ ನಾಲ್ಕು ಸವೆದ ಪದಗಳು...!
$$$$$$$$$$$$$$$$$$$$$$


ಕವಿದಿದೆ ಮೋಡ ಗೆಳತಿ
ಹೆಸರ ಬರೆದಿಟ್ಟು ಹೋಗು
ಮಳೆ ನಿಲ್ಲುವ ಸೂಚನೆಯಿಲ್ಲ...
                  ಈಶ

Tuesday, June 3, 2014

ನಿನ್ನದೇ ಹುನ್ನಾರ!!

 


 ಅಂತರಂಗದ ಮೌನ ಸರೋವರ 
ನೀನು ಮುಖವಿಟ್ಟು
 ಕಾಣುವ ಬಿಂಬಕೆ ನೂರು ರೂಪ
ಕಾಮನ ಕಲರವಕೆ ಬಯಕೆಯ ನೂರು ಬಣ್ಣ!!

************************ 
ಸುಮ್ಮನೆ ಬಿಂದುವಾದೆ
ಸಾಗುವ ದಾರಿಯಲಿ
ಹೇಳಲಾಗದ ಭಾವಗಳು ಹಾಗೇ ಬಿದ್ದಿವೆ
ಒಮ್ಮೆ ನಿನ್ನ ಸ್ಪರ್ಶಕೆ
ಕಾಯಲು ಜೀವಮಾನದ
ಲೆಕ್ಕವೆಕೆ!!
*******************
ನಿನ್ನೆದೆಯ ಮೇಲೆ ನಲಿಯುವ
ತುಟಿಗಳಿಗೆ ತಾಕುವ ನಿನ್ನ ಬಿಸಿಯುಸಿರಲಿ
ಹಸಿಯಾಗಿದೆ ನಿನ್ನೊಲವ ಭಾವವು
ಬಿಗಿಹಿಡಿದ ಬಾಹುಗಳಿಗೆ ಬಂಧನವೇ
 ಬಿಡುಗಡೆಯ ಹರುಷವು !!
******************** 
 ಮತ್ತೆ  ಮತ್ತೆ ಸಿಗುವ
ಸಂಭ್ರಮ ಸಡಗರಕೆ
ನಿನ್ನದೇ ಹುನ್ನಾರ!!

Saturday, February 15, 2014

ಖಾಲಿ ರಸ್ತೆ...

ಖಾಲಿ ರಸ್ತೆ...


ತಣ್ಣನೆ ಗಾಳಿ ಹರಿದಾಡುತ್ತಿದೆ
ಮಿಲನದ ರಾತ್ರಿಯೆಲ್ಲ ಕಳೆದ
ಖಾಲಿ ಮಂಚದ ಹಾಗೆ ಬಿದ್ದಿಹ
ರಸ್ತೆಯ ಮೇಲೆಲ್ಲ
ತಾಕಿ ನಿಂತು ಪಿಸುಮಾತನಾಡಲು
ಉಳಿದಿಲ್ಲ ಅರೆ ಜೀವವೂ
ಬರಿದಾದ ರಸ್ತೆ ನಿಟ್ಟುಸಿರಿಡುತ್ತಿದೆ
ಹಗಲೆಲ್ಲ ಹರಿದು-ಹಂಚಿ ಹರಿದಾಡಿದ
ಜೀವಗಳು ಹೊತ್ತು ಹೋದ
ನೋವುಗಳ ನೆನೆದು
ಮರುಗುವ ದಾರಿಯ ಮೇಲೆ
ಸುಳಿದಾಡುತ್ತಿದೆ ಗಾಳಿ
ಸೋನೆ ಮಳೆಯ
ಸುಳಿವನು ನೀಡದೆ.

Sunday, March 31, 2013

ಆಗಂತುಕ ಕನಸುಗಳು..




ಬಯಕೆಯ ಕನಸುಗಳು
ಕಾರ್ಮೋಡ ಕವಿದ ಬದುಕಿಗೇಕೆ
ಬಂದವು ಆಗಂತುಕರಂತೆ
ನಿರ್ಭೀಡೆಯಲಿ; ಒಳಬಂದು
ಬೀರುತಿಹ ದೂರ್ತ ನಗೆಗೆ
ಕದಡಿದ ಮನದಲಿ ಅಸಹಾಯಕತೆಯ
ಅನಂತ ಮೌನ.

ನೋಟದಲೆ ನಿಂತಿಹ ಕನಸುಗಳು
ಇಳಿ ಸಂಜೆಯ ಮಬ್ಬಿನಲಿ
ಮಂಪರಿನ ಹಾಳು ನಿದ್ದೆಯ ಕಂಗೆಡಿಸುತಿಹ
ಕನವರಿಕೆಗಳು, ಅಳಿದುಳಿದಿಹ ಮೋಹವು
ಉರುಳುತಿದೆ ಕಣ್ಣ ಹನಿಯಾಗಿ
ಆಸರೆಗಾಗಿ ಕೈ ಚಾಚಿದೆ ಬದುಕು
ಜಾರುತಿಹ ಜೀವನದಲಿ ಮಡುಗಟ್ಟಿದೆ ಮೌನ.

 
ಯಾವುದೋ ಅನುಬಂಧಕೆ ಜೋತುಬಿದ್ದ
ನಂಟಿನಲಿ ಅನುಮಾನದ ಎಳೆಗಳು
ಅನುಸಂಧಾನಗೊಳ್ಳದೆ ಅತಂತ್ರವಾಗಿರುವ
ಭಾವಗಳು ಅಲೆದಲೆದು ನಿಂತ್ರಾಣಗೊಂಡ
ಮನದಲಿನ್ನು ಕೊನೆಗಾಣದ ಮೌನ
ಮುಗಿಯದ ಬದುಕು.

Tuesday, December 18, 2012

ಹಾಯ್ಕು !!!!

ಮಂಜು ಕವಿದ ಮುಸ್ಸಂಜೆ 
ಚಳಿಯ ನಡುಕ 
ದಾರಿ ತಪ್ಪಿಹ ಗುಬ್ಬಿಮರಿ.                                             
********************

ಶರತ್ಕಾಲದ ಚಳಿಯೂ 
ಕತ್ತಲಲೆ ಮುಳುಗಿಹ 
ಮುಂಜಾವು.

*********************

ಸಾಗದ ದಾರಿ
ತಿರುವಿನಲ್ಲಿ ಫಲಕ 
ಸೂಚನೆಗಳ ಗೋಜಲಿಗೆ 
ನಿಲುಕದ ಬದುಕು.
*********************
ಕಾಮನಬಿಲ್ಲ ಮಾತಾಡಿಸಿ 
ಬಂದ ಮೋಡಗಳು 
ಬಣ್ಣದ ಮಾತಾಡುತ್ತಿವೆ.





Wednesday, September 12, 2012

ನಸುಕಿನ ನಗುವು..


ನಸುಕಿನ ನಗುವು..

ಸುಡುವ ನೆನಪುಗಳ ಜಾಡಿನ 
ನಸುಗತ್ತಲ ನೀರವದಲಿ 
ಎದೆಯಾಳದಲಿ ಹುದುಗಿ
ಎಂದೋ ಕಾಡಿದ್ದ ದನಿಯೊಂದು 
ಸುಪ್ತವಾಗಿ ಮೇಲೆದ್ದು 
ನಿದ್ದೆಯ ಕಣ್ಗಳು
ದನಿಯ ರೂಪವನು
ಕತ್ತಲಲಿ ಹುಡುಕಿ 
ಹುಡುಕಿ ಸೋಲುವವು!

ಒಮ್ಮೆಗೆ ಬೇಸೆತ್ತು, ಆರಿದ
 ನಿದ್ದೆಯ ಬಾ ಎಂದು ಜಪಿಸಲು
ಬೇಡದ ತುಮುಲ,ತಳಮಳಗಳ 
ಜಾಗಟೆ ಮನದಲಿ 
ಕತ್ತಲ ಸೌಖ್ಯವು ಸಿಗದೇ
ಕಣ್ಣಲ್ಲೇ ನರಳುವ ಕನಸುಗಳು 
ಭಯವ ಹುಟ್ಟಿಸುವವು

ನೀರವದ ಜೊತೆಗೂಡಿ 
ಸಲ್ಲಾಪದ ಪಿಸುದನಿ ಒಳಕಿವಿಗೆ 
ರಾಚಿ ಸರಿಹೊತ್ತಲಿ ಬೇಡವೆಂದರೂ 
ಬಿಡದೇ ಕಾಡಿ ಕಂಗೆಡಿಸುವ 
ಬಿಸಿಯುಸಿರಿನ ಮೋಹ 
ದೂಡಿ ದೂರ ಸರಿಸಿದರು 
ಮನ ಬಯಸುವುದು ಸುಡುವ ತಾಪವ

ಸರಿಹೊತ್ತಲಿ ಕೂಪಕೆ                                           
ದೂಡಿ ನಸುನಗುವ ನೆನಪುಗಳ 
ಮಾರಣಹೋಮ 
ಧಗಧಗಿಸುತಿರುವ ಮನ 
ಮುಂಜಾವಿನ ನಸುಕಿಗೆ ಮಾತ್ರ 
ಉಳಿದಿಹ ನಗುವು!

Sunday, August 12, 2012

ಅಲೆಯಲಿ ಇರುಳೆಲ್ಲ ಹುಣ್ಣಿಮೆ


ನದಿಯ ಹರಿವು 
ಆ ದಡ ಈ ದಡಗಳ 
ನಡುವೆ ಜೀವಂತ 
ಬದುಕು ಹರಿವ ಪ್ರೀತಿಯಲಿ 
ನಿನ್ನೊಡಲಾಳದ ಎಳೆಯ 
ಸೆಳೆತದಲಿ ಬೆಸೆದ ಮೋಹಕೆ 
ತವಕ ಕೂಡಲು.
ಕೂಡುವ ಬಯಕೆಯ ನಡುವೆ'
'ಚಂದಿರ'ನ ಬಿಂಬ 
ಅಲೆಯಲಿ ಇರುಳೆಲ್ಲ ಹುಣ್ಣಿಮೆ.

ಹಾಯುವ ತಂಗಾಳಿಯ ಮಾತು 
ಆಲಿಸುವ ದಡದ ಹೆಬ್ಬಂಡೆಗೆ
ಮುನಿಸು ನಿಂತ ನಿಲುವಲ್ಲೆ
ತಾಕಿ ಹೋಗುವ ಅಲೆಯ ಸಪ್ಪಳಕೆ
ಕಾಯುವ ದಂಡೆಯ ಹೆಮ್ಮರ
ಮಣ್ಣು ಜಾರಿದ ಬೇರಿನ ನಂಟು
ಅರಸಿ  ಬಂದ ಎಲೆ ಸೋಲುತಿಹುದು 
ಹರಿವ ಮೋಹಕೆ
ನದಿಯ ಸೆಳೆತಕೆ....


Sunday, July 8, 2012

ಕವಿದ ಕಾರ್ಮೋಡ!




ಮುಸ್ಸಂಜೆಯ ಸಮಯ ಮಳೆ
ಬರುವ ಹಾಗೇ ಕಾರ್ಮೋಡ
ಯಾಕೋ ನಿನ್ನ ನೆನಪಾಗಿ 
ಬರೆಯುತ ಕೂತೆ.
ಎರಡೇ ಸಾಲು; ಧೋ ಎನ್ನುವ 
ಮಳೆಯ ಹನಿ 
ನೋಡುತ 'ನೆನೆದ' ಮನದ
ತುಂಬೆಲ್ಲ ನಿನ್ನದೇ ರೂಪ.

ಕಾಯುತ ಕೂತ ನಗೆ
ಮೊಗದ ಚೆಲುವೆಗೆ ಮುನಿಸು 
ಬರುವುದು ಚೆಲುವನ ಮೇಲಲ್ಲ 
'ಸಂಧ್ಯಾ'ಸಮಯಕೆ ಸರಿದಾರಿಯಲಿ 
ಕಾರ್ಮೋಡ, ಮಬ್ಬು.
ಹೊತ್ತು ತರುವನು ಇನಿಯ 
ಹನಿ ಹನಿಯಲು 
ಮೋಹ ತುಂಬಿದ ಒಲವ 
ಕಾಯುತ 'ನೆನೆದ' ಮನದ 
ತುಂಬೆಲ್ಲ ಪ್ರೀತಿಯದೇ ಕುರುಹು.

ಕಣ್ಣಂಚಿನ ಕಾತುರಕು ಮೆರಗು
ಕವಿದ ಕಾರ್ಮೋಡವ ಸೀಳಿ 
ಮಿರುಗುವ ಮಿಂಚಿನಲಿ ಹೊಳೆವ 
ಅವಳ ಹಸಿಮೊಗದ ಹುಸಿನಗೆ.
ಕಂಡು ಕಾಣದ ಪ್ರೇಮದ ಲಹರಿಗೆ 
ಸೋತು ನಲಿವ 'ನೆನೆದ' ಮನದ
ತುಂಬೆಲ್ಲ ಜೀವದ ಬಯಕೆ.

ಕವಿದ ಕಾರ್ಮೋಡ...
...............ಮಬ್ಬು...
ಸಂಜೆಮಳೆ ಬರುವ 
ಹಾಗೇ...


Thursday, June 21, 2012

ಉಳಿದಿಹ ...!

ದಾರಿಯಲ್ಲಿ ಉಳಿದಿಹ 
ಒಂಟಿ ಹೂವ  ಮೇಲಿನ 
ಇಬ್ಬನಿಗೆ ನಾಚಿದ 
ಗುಬ್ಬಿ ಮರೆತು ಕೂತಿದೆ
ತನ್ನ ಗೂಡನು...
***************************
ಸೋತರು ಜೀವ ನಿನ್ನ 
ಎದೆಯಲಿ ಉಳಿದಿಹ 
ಮೋಹಕೆ ಬಲೆಯ 
ಬೀಸಿ ಕಾದೆ.
ದಾರಿ ಬದಿಯಲಿ 
ಹೂ ಮಾರುವ ಹುಡುಗನ 
ಕೈಗೆ ಹತ್ತಿದ 
ಪರಿಮಳ ಸೋಕಲು 
ಮನಕೆ ಮತ್ತೆ ನಿನ್ನದೇ 
ಸ್ಪರ್ಶದ ನೆನೆಪು...
*************************
ಭಾವಕೆ ನಿಲುಕಿ 
ಪದಗಳಿಗೆ ಸಿಗದ ಅನನ್ಯೇ
ಕಾಮನಬಿಲ್ಲ ಮೋಹಿಸಿ 
ಸೋತರು ಉಳಿದಿಹ 
ಛಾಯೆಗೆ ನೂರು ಬಣ್ಣ....
***************************

Wednesday, March 21, 2012

ದಾರಿ ಬದಿಯ ಬದುಕು


  ದಾರಿ ಬದಿಯ ಬದುಕು

ಕಾಯುವ ಮನ, ಬಿಸಿಲ ಜಲಪು 
ಬಿರಿದ ಹೂವಿಗೆ ರವಿಯ                                                                        
ಕಾಮನೆ ಅರಿವಾಗದೆ ಮುದುಡಿದೆ
ಸೂರ್ಯನದೋ ಸದಾ ಸಲ್ಲಾಪ!

ಒಂಟಿ ಮನೆಯ ತಾರಸಿಯ ಮೇಲೆ 
ಒಂಟಿ ಹೆಣ್ಣು ನೀರುಣಿಸಿ 
ಕುಂದದಲಿ ಬೆಳೆಸಿದ ಅಡಿ ಎತ್ತರದ 
ಗಿಡದಲೂ ಒಂಟಿ ಹೂವು!

ಬದುಕು ದಾರಿ ಬದಿಯಲಿ 
ಜಡಿ ಮಳೆಯಲಿ ಕೊಚ್ಚಿ ಹೋಗದೆ 
ನಿಂತು ನೆರಳಾಗಿರುವುದ ಕಂಡು 
ನಿಟ್ಟುಸಿರಿಡುವ ಅಜ್ಜನ ಮುಪ್ಪು!

ನಿರಂತರ ಸಲ್ಲಾಪದ ಜೊತೆಯಲೆ
ಸೋತು ಸೊರಗುವ 
ನದಿಯ ವಯ್ಯಾರವ ಅಣಕಿಸುತ 
ನಿಂತಲೇ ನಿಂತ ದಡದ ಹೆಬ್ಬಂಡೆ!

ಅಜ್ಜಿಯ ಮುಖದಲಿ ಮೂಡಿದ 
ಅನುಭವದ ಮುಪ್ಪಿನ ರೇಖೆಗಳ 
ಕಂಡು ಮುಗುಧ ನಗೆ ಚೆಲ್ಲುವ 
ಕಂದನಿಗೆ ಉಳಿದಿಹ ತೀರದ 
ಯಾನ!!