Monday, December 13, 2010

ಬರೆಯಲಾಗದ ಖಾಲಿ ಪುಟ..


ಭಾಷೆ ಅರಿವವರು
ನೂರಾರು ಮಂದಿ
ನನ್ನ ಭಾವವ ಅರಿವವಳು
ನೀ ಒಬ್ಬಳೇ
ಸಹೃದಯಿ...

ಬರೆದ ಸಾಲು ಸಾಲು
ಪುಟವು ಅನುಭವದ
ಸರಮಾಲೆ.

ನಾ ಬರೆಯಲಾಗದೆ
ಮನದಲಿ ಹಾಗೇ
ಉಳಿಸಿದ ತಿಳಿ
ಭಾವವು ನಿನ್ನ
ಪ್ರೇಮ ಅನುಭಾವದ
ನವಿರುತನ ಇದೆ
ಹಾಗೇ ಮಡಿಸಿಟ್ಟ
ಖಾಲಿ ಹಾಳೆಯಂತೆ.

Friday, November 26, 2010

ಪ್ರೀತಿಯ ನೆಪವಾಗಿ!




ಬರೆದ ಅಕ್ಷರಗಳೆಲ್ಲ
ಬದುಕ ಕಾವ್ಯವಾಗಲೆಂಬ
ಭ್ರಮೆ, ಜೀವಂತವಾಗಿರಿಸಿದೆ
ಅಕ್ಷರಗಳ ಮೇಲಿನ
ನನ್ನ ಪ್ರೀತಿಯ.
**************************
ನಾ ಸೆಳೆದು ಬಿಡುವ
ಸಿಗರೇಟಿನ ಧೂಮದಂತೆ
ದೂರಾದೆ ನನ್ನ ಅಗಲಿ
ಕಾಡುತ್ತಿರುವೆ ಶ್ವಾಸದಲಿ
ಅಳಿದುಳಿದು ಕ್ಯಾನ್ಸರ್ ನಂತೆ
ಮಾಸದ ನೆನಪಾಗಿ...

*****************************

ಆ ನಿನ್ನ ಹುಸಿ ನಗೆ

ನೋಟ,ಮಾತು,ಮೌನ

ಕೊಂಕು ಕಾರಣಗಳಿಗಾದರೂ
ನಾ ಬದುಕಬೇಕು

ಉಸಿರ ಬಿಗಿ ಹಿಡಿದು
ನೂರುಕಾಲ
ಪ್ರೀತಿಯ ನೆಪವಾಗಿ!

*********************************

Saturday, November 6, 2010

'ಆತ್ಮ'ಹತವಾಗಿ..


















'ಆತ್ಮ'ಹತವಾಗಿ..


ಹುಟ್ಟುತ್ತೆನೆಂದು ಎಣಿಸಿರಲಿಲ್ಲ
ಜೀವನವೇ 'ವಿಪರ್ಯಾಸ'
ಸೋಲಿನಲಿ ಗೆಲವು,ಗೆಲುವಿನಲಿ
ಸೋಲುಗಳ ಸರಮಾಲೆಯ
ಗೊಜಲಿನ ಎಳೆ ಎಳೆಯನು ಬಿಡಿಸುತ್ತ
ಅರಿವಿರದೆ ಸಾಗುವ ಬದುಕ
ಅರಿವ ಭ್ರಮೆಯ ಓಟವೇ ಕೊನೆತನಕ.

ಬದುಕಿಗೊಂದು ಅಂತ್ಯ 'ಸಾವು'
ದಿನ ದಿನವೂ ನಮ್ಮೊಳಗೇ ಉಸಿರುಕಟ್ಟಿ
ಸಾಯುತಿಹ ಕನಸ ಭ್ರೂಣಗಳೇ
ಕೇಕೆಯ ಹಾಕುತಿಹವು
ಬದುಕಲಾರದ ಬದುಕಿನ
ಕ್ರೂರ ಬರ್ಭರತೆಯ ಕಮಟು
ಪ್ರತಿ ಗರ್ಭಕೂ ತಾಕಿ ನಿಸ್ತೇಜ
ಜೀವಕೆ ಬದುಕಿನ ನಶ್ವರತೆಯ
ತಿಳಿಹಾಲ ಬಡಿಸುತಿಹವು.

ಎದೆಹಾಲ ಸವಿಯ ಸವಿವ ಮುನ್ನವೇ
ಭ್ರೂಣಗಳ 'ಆತ್ಮ'ಹತವಾಗಿ,ಜೀವ
ಜೀವಮಂಡಲದ ಹೊಸ್ತಿಲಲಿ
ಹಸಿಯ ಹುಸಿನಗೆಯಲಿ
ಹತಾಶೆಯ ಕಣ್ಣ ಅರಳಿಸುತಿಹವು..
ಎಚ್.ಎನ್.ಈಶಕುಮಾರ್

Friday, October 15, 2010

ತೀರ್ಪು










ಕರ್ಫ್ಯೂ ವಿಧಿಸಿದ ಬೀದಿ ಬೀದಿಯಲಿ
ಆತಂಕದ ನಡುವೆ
ರಾಮನ ಜಪತಪ
ಪುರಾಣ ಪುಣ್ಯಕತೆಗಳ
ಕೆದಕಿ ಮತ್ತೆ ಮುಂದಿಟ್ಟ
ತ್ರೇತಾ ಯುಗದ
ನಂಬುಕೆಯ ಕಗ್ಗಂಟು.
ಬಿಡಿಸಲಾಗದ ಮಹಾಪುರುಷರದಷ್ಟೇ
ವಾದ ಅಪ್ಪ ಹೇಳಿದ ಕಥೆಯಲಿ
ರಾಮನುಟ್ಟಿದ 'ಅಯೋಧ್ಯೆಯಲಿ'.

ತಂದೆಗೆ ತಕ್ಕ ಮಗ 'ರಾಮ'
ಬಿಟ್ಟು ನಡೆದ ಕಾಡಿಗೆ 'ರಾಜ್ಯವ'
ಮರ್ಯಾದ ಪುರುಷೋತ್ತಮ 'ಶ್ರೀರಾಮ'
ಅಟ್ಟಿದ ಕಾಡಿಗೆ ಮಡದಿಯ
ಒಡ್ಡಿದ ಅಗ್ನಿಗೆ ತನ್ನೊಡತಿಯ
'ನಿಷ್ಕರುಣಿ' ರಾಮ.

ಸೀತೆಯುಂಡ ನೋವಲಿ ಅವನಾದ
ಏಕಪತ್ನಿವ್ರತನು ರಾರಾಜಿಸುತಿಹ
ಇಂದಿಗೂ ಪ್ರತಿ ಪತ್ನಿಯರೆದೆಯಲಿ
ಪತಿಯ ಮೇಲಿಹ ದೈವತ್ವದ
'ಸರ್ವನಾಮ'ವಾಗಿ
ಸರ್ವಾಂತರ್ಯಾಮಿಯಾಗಿಹ ರಾಮನನು
ಪವಿತ್ರ ಜನ್ಮಸ್ಥಳವೆಂಬ
ಕುರುಡು ನಂಬಿಕೆಯಲಿ
ಅಯೋಧ್ಯೆಯ ಗರ್ಭಗುಡಿಯ
ಕತ್ತಲಲಿ ಕೂಡಿಹುದು ದುರ್ದೈವ
'ಭರತಭೂಮಿಯ' ರಾಮನ.

Tuesday, October 5, 2010

ಮಳೆಯ ಮಾತು..



ಬಿದ್ದ ಬಿರುಮಳೆಯ
ಹನಿ ಹನಿಯೂ ಕೂಡಿ
ಸಿಕ್ಕ ಜಾಡ ಹಿಡಿದು ಓಡುವ ಪರಿ
ಬೋರ್ಗರೆದ ಮಳೆಯ ಮಿಳಿತಕೆ
ಹಸಿಯಾದ ನೆಲದ

ಮೆತ್ತನೆ ಸ್ಪರ್ಶ
ತೊಟ್ಟಿದ್ದ ಪಾದಕಷ್ಟೆ,
ಪಚ ಪಚನೆ ತುಳಿದ
ಮೆದುನೆಲದಲಿ
ಕೆಂಪನೆ ನೀರ ಬುಗ್ಗೆ
ಕ್ಷಣಕೆ ಒಡೆಯಲು
ಕಿತ್ತ ಹೆಜ್ಜೆಗುರುತಲಿ
ಮೂಡುವ ಚಿತ್ತಾರ
ಕಣ್ಣಳತೆಗೆ ಸಿಗದೆ ಜಾರಲು
ಹಸಿರೆಲೆಯ ಮೈ ಸೊಕಿಸಿ
ಜೋತು ಬಿದ್ದು ನೆಲಕೆ ಜಾರುವ

ಹನಿಯಲುಳಿವ ನವಿರು
ಮುತ್ತಿಕ್ಕಿ ಮಣ್ಣ ಸುಳಿದಾಡುವ
ಕಂಪು, ಬೆಟ್ಟದ ಒಡಲಲಿಳಿದ

ಮರವೆಲ್ಲ ತೊಳೆದ ಮೈಯ
ಗಾಳಿಗೊಡ್ಡಿ ತೊನೆಯಲು
ಹಸಿರ ಬೆಟ್ಟವೇ ಅತ್ತಿತ್ತ

ಸುಯ್ಯುವ ಹಾಗೇ
ಕಣ್ತುಂಬಿ ಬಂದ ಹೊತ್ತಲಿ
ಉಸಿರ ಎಳೆದು ಬಿಡುವ

ನಿಟ್ಟುಸಿರ ನಡುವಲಿ ಸಾಗುತಲಿತ್ತು
ಭಾರದ ಹೆಜ್ಜೆಯ ಲೆಕ್ಕಾಚಾರ
ಮನದಿ...




Monday, September 13, 2010

ಸಂಜೆಯ ಕೆಂಧೂಳಿಯಲಿ.

















ಸಂಜೆಯ ಕೆಂಧೂಳಿಯಲಿ.

ನನ್ನ ನೀ ಕರೆದರೂ
ಕಾಯುವೆ ಇನ್ನಾರಿಗೋ
ಬೇಡಿ ಬಂದರೂ ನಿನ್ನ ಬಳಿ
ಹರಸುವೆ ಸಾಂಗತ್ಯದ ಸವಿ
ನಿನ್ನ ತನವಳಿದ ಅವಳ ಬದುಕಲಿ.
ಎಂದೋ ನನ್ನ-ನಿನ್ನ ಸೇರಿಸಿ
ಆಟವಾಡಿಸುತ್ತಿದೆ ವಿಧಿಯೂ
ಯಾರು-ಯಾರ ವಂಚಿಸಿ
ವಿರಮಿಸುವರು,
ದಾರಿ ಬದಿಯ ಹೆಜ್ಜೆಗುರುತು.
ಆಕಾರವಿಹ ನಶ್ವರ ಬದುಕು
ಎಂದೋ ಬಂದು,ಇಂದು ಸಾಗಿ
ಮುಂದೆ ಮರೆತು ಹೋಗುವ
ನಾವು-ನೀವು ಋಣಿಗಳು
ನಿಮ್ಮೆದೆಯಲಿ ನಮ್ಮೆಡೆಗೆ
ಪುಟಿವ ಬೆಚ್ಚಗಿನ ಪ್ರೀತಿಯ
ಅಮೂರ್ತ ಭಾವಕೆ...
ಭಾವ ಭಾವದೊಲುಮೆಯ
ಸವಿಯನೊಮ್ಮೆ ತಾ ಸವಿದು
ತನ್ನವರಿಗೆ ಹಂಚುತಿರಲು
ಒಲುಮೆ ಉಯ್ಯಾಲೆಯ
ಸಂಭ್ರಮದ ಜೀಕಾಟ ಬದುಕಲಿ,
ಎಲ್ಲರೆದೆಯಲು ರಂಗು ರಂಗಿನ
ರಂಗವಲ್ಲಿ ಸಂಜೆಯ ಕೆಂಧೂಳಿಯಲಿ.

Thursday, August 19, 2010

ಕಂದಕಗಳ ನಡುವೆ...


A man in Mumbai sees a dog attacking a lady.
He kicks the dog and it dies.
News paper report: "Local hero saves lady from dog. "Man says i am not Indian.
Report is changed; "Foreign hero saves lady from dog".
Man says actually I am Pakistaani next day Headlines:

"TERRORIST KILLS INNOCENT DOG".

ಸ್ನೇಹಿತ ಕಳಿಸಿದ ಇಂತದೊಂದು ಸಂದೇಶ ಮೊಬೈಲಿನಲ್ಲಿ ಓದಿದ ತಕ್ಷಣವೇ ಅನಿಸಿದ್ದು ಎಂಥ 'ವಿಲಕ್ಷಣ ಸತ್ಯ'ವಿದು. ಅಮೆರಿಕ ಬ್ರಾಂಡ್ ಜೀನ್ಸ್ ಹಾಕಿ, ಜರ್ಮನ್ ಬ್ರಾಂಡ್ ಶರ್ಟ್ ಧರಿಸಿ,Black Berry ಮೊಬೈಲ್ ಫೋನ್ ಗೆ bluetooth ಸಿಕ್ಕಿಸಿಕೊಂಡು ಹರಟುವ ಗ್ಲೋಬಲ್ village ಕಾನ್ಸೆಪ್ಟ್ ತದ್ರೂಪಿನಂತೆ ದೊಡ್ಡ ದೊಡ್ಡ ನಗರಗಳಲ್ಲಿ ಚಿತ್ರ-ವಿಚಿತ್ರವಾಗಿ ಅಲೆದಾಡುವ ೨೧ ಶತಮಾನದ ಅರೆಬೆಂದ ಮನಸುಗಳಲಿ ವಿರಾಜಮಾನವಾಗಿರುವ 'ಸಂಕುಚಿತತೆಯ' ಭಾವವಿದು. ವೈಜ್ಞಾನಿಕವಾಗಿ,ತಾಂತ್ರಿಕವಾಗಿ ಜಗಕ್ಕೆ ಮಾದರಿ ಎನುವಂತೆ ನಾವಿದ್ದರು ನಮ್ಮ ನಮ್ಮ ನಡುವಿರುವ 'ಗೋಡೆಗಳನು' ಮೀರುವ ಪ್ರಯತ್ನ ನಮ್ಮಿಂದ ಆಗಿಯೇ ಇಲ್ಲವೇನೋ ಎನಿಸುವುದು. ನಾವೇ ಹಾಕಿಕೊಂಡ 'ಲಕ್ಷ್ಮಣ ರೇಖೆ'ಗಳನು, ನಾವೇ ನಿರ್ಮಿಸಿಕೊಂಡ ಕಂದಕಗಳನು ಮೀರುವುದು ಎಷ್ಟು ಕಷ್ಟ. ನಮ್ಮ ಸಂವೇದನೆಗಳನು ನಿಯಂತ್ರಿಸುತ, ಗಡಿದಾಟದ ಹಾಗೇ ಲಗಾಮು ಹಾಕಿವೆ ಅಮೂರ್ತ ಕಂದಕಗಳು.
ಮಾನವ- ಮಾನವನ ಸಹಿಸಲಾಗದ ಸ್ಥಿತಿಯಲಿ ನಾವಿದ್ದೇವೆ. ಅಸಹನೆಗೆ ಕಾರಣ ಧರ್ಮ-ಅಧರ್ಮಗಳ ನಡುವಿನ ಯುದ್ದವೇನು ಅಲ್ಲ, ಕೆಡುಕರನು, ಸಮಾಜ ವಿದ್ರೋಹಿಗಳನು ದೂರವಿಡುವ ಹೋರಾಟದ ಭಾವವೇನು ಅಲ್ಲ. ಪಾಕಿಸ್ತಾನ ಭಯೋತ್ಪಾದಕರನ್ನು ಉತ್ತೇಜಿಸಿ ಭಾರತ ಮತ್ತು ಭಾರತೀಯರ ಮೇಲೆ ನಡೆಸುತ್ತಿರುವ ಅವರ ಹೇಯ ಕೃತ್ಯಗಳನ್ನುಹಾಗೂ ಮೃಗೀಯ ವರ್ತನೆಯನ್ನು ಖಂಡಿಸುವ ರೀತಿ ಎಂಬಂತೆ ನಾವು ನಮ್ಮ ಮನೆಯ ಪಕ್ಕದ "ಮುಸ್ಲಿಮರನ್ನು ಪಾಕಿಸ್ತಾನದ ಭಯೋತ್ಪಾದಕನಂತೆ"ನೋಡುವ ವಿಚಿತ್ರ ಧೋರಣೆ ನಮ್ಮಲ್ಲಿ ಬೆಳೆಯುತ್ತಿದೆ. ಎಲ್ಲವನ್ನು ಒಂದೇ ರೀತಿಯಾಗಿ ನೋಡುವ ಮನೋಭಾವ. ರಾಜಕೀಯ ಪ್ರತಿಷ್ಠೆಗಾಗಿ ದೇವೇಗೌಡ, ಸಿದ್ದರಾಮಯ್ಯರು ಒಬ್ಬರನೊಬ್ಬರು ವಿರೋದಿಸಿದರೆ ಒಕ್ಕಲಿಗರೆಲ್ಲ ಕುರುಬರನ್ನು, ಕುರುಬರೆಲ್ಲ ಒಕ್ಕಲಿಗರನ್ನು ವೈರಿಗಳಂತೆ, ಅಸ್ಪೃಶ್ಯ ರಂತೆ ಕಾಣುವ ಮನೋಭಾವ ಬೆಳೆಸಿಕೊಳ್ಳುವ ಮ್ಮ ವರ್ತನೆ ಎಂಥ ವಿಚಿತ್ರ.ತನ್ನ ಧರ್ಮ,ತನ್ನ ಜಾತಿ, ಭಾಷೆ, ಜನಾಂಗಕ್ಕೆ ಸೇರದವನು 'ಉತ್ತಮನಲ್ಲ, ಶ್ರೇಷ್ಠ ನಲ್ಲ' ಎನುವ ಸಂಕುಚಿತ ಭಾವ ನಮ್ಮದಾಗಿದೆ ಇಂದು. ಮಾನವ ಯಾವುದೇ ಜಾತಿಗೆ,ಕೋಮಿಗೆ ಸೇರಿದ್ದರು 'ಮಾನವೀಯತೆಯ ಶ್ರೇಷ್ಠ ಗುಣ" ಜಾತಿ-ಧರ್ಮ,ಪ್ರಾಂತ್ಯಕ್ಕೆ ಸೋಗು ಹಾಕಿಕೊಂಡು ಅಂಟಿಕೊಂಡಾಗ ಮಾನವನ ವರ್ತನೆ ತೀರ ಅರ್ಥಹೀನವಾಗಿಬಿಡುವುದು. ಮಾನವೀಯ ಮೌಲ್ಯಗಳನೆಲ್ಲ ದೂರ ಸರಿಸಿ,ಸಮಷ್ಠಿಯ ಒಳಿತನ್ನು ಮರೆತು, ಸ್ವಾರ್ಥ ಸಾಧನೆಗಾಗಿ ತನ್ನ, ತನ್ನ(ಕೋಮಿನ)ವರ ಏಳಿಗೆಯನಷ್ಟೇ ದೃಷ್ಟಿಯಲಿಟ್ಟುಕೊಂಡು ಕೆಲಸ ಮಾಡುವ ಇಂದಿನ ರಾಜಕಾರಣಿಗಳು ತಮ್ಮ ಅಜ್ಞಾನ, ಅನಾಚಾರಗಳಿಂದ ತಮ್ಮ
ಕೂಪ
ಮಂಡುಕತನವನ್ನು ಎಲ್ಲರ ಮನದಲ್ಲೂ ಬಿತ್ತುತ್ತಾ ಸಾಗುತ್ತಿರುವುದು ಅರ್ಥಹೀನ ವರ್ತನೆಗೊಂದು ಉತ್ತಮ ನಿದರ್ಶನ. ಒಂದು ಜಾತಿಗೊಬ್ಬ ನಾಯಕ,ಅವನ ಶ್ರೇಷ್ಠ ಗುಣವೆಂದರೆ ಆತ ನಮ್ಮ ಜಾತಿಗೆ ಸೇರಿದವನು ಎಂಬುದು. ಅವನಿಗಲ್ಲದೆ ಬೇರೆಯವನಿಗೆ ಮತ ಚಲಾಯಿಸುವುದು ತನ್ನ ಹಂತದಲ್ಲಿ ನಿಷಿದ್ಧ ಮಾತ್ರವಲ್ಲದೆ ತಾನು "ತಮ್ಮವರಿಗೆ ಮಾಡುವ ದ್ರೋಹವೆಂಬ 'ಚಿಂತನ ಲಹರಿಯಲಿರುವ" ಜನರದು ಮುಗ್ದತೆಯೋ,ಮೂಢ ಆಚಾರವೋ ತಿಳಿಯಲಾಗದಷ್ಟು ಸೂಕ್ಷ್ಮ, ಸಂಕೀರ್ಣ ಮತ್ತು ಅಸ್ಪಷ್ಟವಾದ ವಿಚಾರ.

'ಗಂಡ-ಹೆಂಡತಿ-ಮಗು'ಎಂಬುದಷ್ಟಕ್ಕೆ ಮಾತ್ರ ಸೀಮಿತವಾಗಿಹ ವಿಭಕ್ತ ಕುಟುಂಬ ಜೀವನ ಪದ್ಧತಿ ಮುಖ್ಯವಾಹಿನಿಗೆ ಬಂದಂತೆಲ್ಲ 'ಸಮಾಜ ಜೀವಿಯಾಗಿ' ಮಾನವನಿಗೆ ಇರಬೇಕಾದ ಸಾಮಾನ್ಯ ಅಂಶಗಳು ನಮ್ಮಲ್ಲಿ ಇಲ್ಲವಾಗಿವೆ. ನೆರೆ-ಹೊರೆಯವರ ಮೇಲಿರಬೇಕಾದ ಮಾನವೀಯ ಸಹೋದರತ್ವ ಮಾಯವಾಗಿದೆ. ನಮಗೆ,ನಮ್ಮ ಮನೆಯವರಿಗೆ ಸಂಬಂಧಿಸದ ಯಾವುದೇ ವಿಚಾರ ನಮ್ಮದಲ್ಲ, ಯಾರದೋ ಸಾವು-ನೋವುಗಳಿಗೆಲ್ಲ ಮರುಕಪಡುವಷ್ಟು ಸಮಯ,ವ್ಯವಧಾನ ಇಲ್ಲವಾಗಿ ಪ್ರತಿ ಕುಟುಂಬವು ಸಾಗರದಲಿರುವ ಲಕ್ಷ ಲಕ್ಷ ದ್ವೀಪಗಳಂತೆ ಸಮಾಜದ ನಡುವೆ ಜೀವಿಸುತ್ತಿವೆ. ಎಲ್ಲ ವಿಚಿತ್ರ, ಅರ್ಥಹೀನ ಮಾನವ ನಡುವಳಿಗಳು ಎಗ್ಗಿಲ್ಲದೆ ಬೆಳೆಯುತ್ತಿರುವ ಮಾನವ ಸಮಾಜದಲಿನ ಜನರ ಎಲ್ಲ ಭಿನ್ನತೆಗಳನು, ಆಚಾರ-ವಿಚಾರಗಳನು ನಿರ್ಮಲ ಮನಸ್ಥಿತಿಯಲಿ ಸ್ವೀಕರಿಸುವ, ಹೃದಯ ಶ್ರೀಮಂತಿಕೆಯ ಸಹಿಷ್ಣುತ ಭಾವ ಮಾತ್ರ ಎಲ್ಲರೆದೆಯ ಗಡಿದಾಟಿದೆ..

Sunday, August 15, 2010

ಸರ್ವ ಜನಾಂಗದ ಶಾಂತಿಯ ತೋಟದಲಿ
ಸರ್ವ ಜನಾಂಗದ ಸಂತಸದ ಸಂಭ್ರಮವಿರಲಿ...
ಸ್ವತಂತ್ರ ಹಬ್ಬದ ಶುಭಾಶಯಗಳು...

Saturday, July 31, 2010

ನೆನಪ ಗಿಡ...


ಕಾಲ ಸರಿಯುವ ಮುನ್ನ
ಮಾತು ಮುಗಿಯುವ ಮುನ್ನ
ನೆನಪ ಗಿಡವಾಗಿಬಿಡು
ಮನದ ಅಂಗಳದಿ
ಪೊರೆದು ತೊರೆವೆನು ನಿನ್ನ
ನಾ ಸರಿಯುವ ಮುನ್ನ.....





ನಿನ್ನ ಮರೆವ ಹೊತ್ತಿಗೆ
ನೆಪವಾಗಿ ನೆನಪಾತು
ನೀ ನಿಟ್ಟ ಆಣೆಯ ಮಾತು
'ನೀ ಮಡಿದರು ನೀನೆ
ನನ್ನ ಮೊದಲ ಪ್ರೀತಿಯು,
ನಾ ಮರೆತರು ಮನ
ಮರೆಯದ ಮೊದಲ
ಪ್ರಿಯತಮನು'.
ಮೋಡದ ಮರೆಯಲಿ
ನೇಸರ ಮರೆಯಾಗುವ
ಹೊತ್ತಲಿ ನಿನ್ನ ನೆನಪು
ಮನದಂಗಳದಲಿ
ದೀಪದಂತೆ ಬೆಳಗುತಿದೆ.

Monday, July 12, 2010

ಕಣ್ಣ ಆಳದಲಿ...

ಕಣ್ಣ ಆಳದಲಿ...


ಬಾಯಾರಿದ ಬದುಕು!
ಬೊಗಸೆಯೊಡ್ಡಿ ಬೇಡಿ
ದಣಿವಾರಿಸುವ ನೀರಿಗೆ
ಸಾಕೇನು ಬೊಗಸೆಯ
ಆಳ-ವಿಶಾಲ.
ಸಾಕೇನಿಸದಿರಲು ಅದು 'ಪ್ರೀತಿಯೇ'
ದಣಿವಾರುವುದು ಕ್ಷಣದಲಿ
ಬೊಗಸೆಯಲಿ ಆನಿಸಿ
ಕುಡಿದ ನೀರಿಗೆ.
ಹೊಟ್ಟೆ ಹೊರೆಯುವ
ಜೀತದ ಪರಿ,ದಣಿವುದು
ದೇಹ ಅನುಗಾಲವು
ಹಿಡಿ ಅನ್ನಕ್ಕಾಗಿ.
ಆದರೂ ಆವರಿಸಿಹುದು
ನನ್ನನು-ನಿನ್ನನು ಬಿಡಿಸಲಾಗದ
ಮೋಹ.
ಮೋಹದೊಡಲ ಕಿಚ್ಚನು
ತಣಿಸಲೇ ಸೋತು ಸೋತು
ಬಟಾ ಬಯಲಿನ ದಾರಿ ಬದಿಯ
ನೆಳಲಲಿ ಕೂತು
ದಿಗಂತದೆಡೆಗೆ ದಿಟ್ಟಿ ಬೀರಲು
ಬರಿದೇ ಬದುಕಿನ ಬರ್ಬರತೆಯ
ರಾಡಿ ರಾಚಲು ಕಣ್ಣ ಆಳದಲಿ
ಮಿರುಗುವುದು 'ನಶ್ವರತೆಯ ಹೊನಲು'
ಜೀವನ ಶೂನ್ಯವು...

Tuesday, May 25, 2010

ಹಾದಿಯ ಹಂಗು ತೊರೆದ ನದಿ...











ನದಿ ತೊರೆದು ಹೋದ ಪಥದಂತೆ
ಜೀವನದಿ ನೀ ತೊರೆದರು
ಕಡು ಕತ್ತಲ ನೀರವದಿ ತುಡಿವ
ನನಂತರಾಳದ ಬೇಗುದಿ ನೀನು.
ಕಾಲ ಎಡವಿನಂತರದಲೇ ನೀನಿರುವಾಗ
ನಿನ್ನ ಅಂತರಾಳವ ಅರಿಯಲಾಗದೆ
ನೀ ಅಗಲಿ, ನೆನಪಾಗಿ
ಮಾಗಿಯ ಚಳಿಯಲಿ ವಿರಹಿಯ
ಮೈ ಕೊರೆವ ಹಿಮಶೀತದ
ತಂಡಿಯಂತಾಗಲು,
ಪ್ರೀತಿ ಪ್ರೇಮ ಕೊನರುವ
ಮನದಿ ಬರದ ಬರನಾಡಿನ
ನಿರ್ಲಿಪ್ತವು ಆವರಿಸೆ
ಬದುಕ ಹಾಯಿದೊಣಿಗೆ
ಬೈಗಿನ ಮಬ್ಬು ಮುತ್ತಿ
ಕತ್ತಲ ಕರಾಳ ಬಾಳಿನಾದಿಗೆ
ಹೊತ್ತೊಯ್ಯುತ್ತಿತ್ತು .

ನದಿ ಹಂಗು ತೊರೆದ ಹಾದಿಗುಂಟ
ಹಾಸಿ ಹೋದ ಮರಳ ರಾಶಿಯ
ನುರುಚುಗಲ್ಲ ಮೈ ಅಪರಾಹ್ನ
ಸುಡುಬಿಸಿಲಿನ ಬೇಗೆಯಲಿ
ಬೇಯುವಂತೆ,ಒಲವದೂಡಿದ
ಮನದ ಒಳಗುದಿ ನೆನಪ
ಯಜ್ಞ ಕುಂಡ ಜ್ವಲಿಸುತಿಹುದು
ಎನ್ನದೆ ಜೀವ ಬತ್ತಿಯ ಸುಡುತಿಹುದು
ಅಹರ್ನಿಶಿ .
ಈಶಕುಮಾರ್

Saturday, May 8, 2010

ತ್ರಿಶಂಕುವಾಗಿ..






ನನ್ನನ್ನೆ ಮರೆತು
ಉಸಿರಾಟದ ನೆಪದಲಿ
ಜೀವವ ಜೀಕುವ
ಪರಿ ನನ್ನದು.
ನಿನ್ನ ನೆನೆದು ನೆನೆದು
ನನ್ನ ವಿರಹವ
ಮರೆಯುವ ನೆಪದಲ್ಲೆ
ಲೋಕವನು ಸಹ
ಮರೆತು ನನ್ನಲ್ಲೂ
ನಿನ್ನಲ್ಲೂ ಇದ್ದು
ಇಲ್ಲದಾಗಿರುವೆ
ನಾ ಜೀವಿಸುತ
ತ್ರಿಶಂಕುವಾಗಿ...

Thursday, April 22, 2010

ಬಿಂದು-ಅನಂತ.




ಅಪರಿಚಿತ ಜೀವಾತ್ಮಗಳೆರಡು
ಅನುರಗಾದಿ ಬೆರೆತು ಅವರೊಲವ
ಕುರುಹು ತಾಯಗರ್ಭದಲಿ ಮೂಡಿದ
ಜೀವದ ಆಶಾಕಿರಣದ ಉಸಿರ
ಪ್ರತಿ ಎಳೆತದಲು
ಬಸಿರ ಜೀವದ ಅಂತಃಕರಣ.
ಜೀವ ಚೇತನದ ಚಿಗುರೊಡನೆ
ಗರ್ಭದೊಡಲು ತುಂಬಲು
ಪ್ರತಿದಿನವೂ ತನುವ ಚೈತನ್ಯವು
ಹಿಮ್ಮಡಿಯಾಗಿ ಪ್ರಸವವೇದನೆಯ
ಆ ದಿವ್ಯಘಳಿಗೆಯಲಿ ದೈದಿಪ್ಯಮಾನವು
ಮೂಡಲು ತಾಯಿಯ ಮನದೊಡಲ
ಸಂತುಷ್ಟವು ಆ ಕಂಗಳಲಿ
ಪನ್ನೀರ ಬಿಂದುವಾದವು.

ಪ್ರಕೃತಿಯ ಜಗದಲಿ ಹಸಿರ
ಅಭೂತಪೂರ್ವ ಸಿರಿಯಾ ಹೊಮ್ಮಿಸಿ
ಚಿಮ್ಮಿಸಲು ತಂಗಾಳಿಯ ತಂಪನ್ನ ಹೀರಿ
ಘನಿಗೊಳ್ಳುತ ಮೋಡ ತನ್ನ ಒಡಲನು
ಅಗಾಧವಾಗಿಸುತ ಭುವಿಯ
ಪ್ರೇಮ ಮಂತ್ರಕೆ ಮಾಗಿ ಕಪ್ಪಾಗಿ ಬೀಗಿ
ತನ್ನೊಲವು ಹನಿ ಹನಿಯಾಗಿ
ಭುವಿಯ ಮುತ್ತಲು ಕೂಡಿದ
ಪ್ರತಿ ಹನಿಯ ಹರಿವು ನದಿಯಾಗಿ
ಜೀವಹೊಮ್ಮಲು ತಾಯಗರ್ಭದಂತ
ಸಾಗರದೊಡಲ ಮೋಹದ ಮುರಳಿ
ರಾಗವು ಕರೆಯಲು ಗುರಿಯ ಚಿತ್ತದಿ
ನದಿ ತನ್ನ ಮರೆಯಲು
ಲೀನವು
ಸಾಗರನ ಅನಂತ ಗರ್ಭದೊಳು.
ಎಚ್.ಎನ್.ಈಶಕುಮಾರ

Wednesday, April 7, 2010

ಜಾಲಿಯ ಮುಳ್ಳಿನ ನಡುವೆ...


ಕತ್ತಕೂಪವೇ ಮೈದಾಳಿ ನಿಂತ
ಗುಡಿಸಲು ಒಳಗೆ ಮಿಸುಕಾಡುವ
ಬುಡ್ಡಿ ದೀಪದ ಸಾವಿನಂಚಿನ ಬೆಳಕು;
ಹಸಿದು ಹಾಲಿಗಾಗಿ ಅಳುತ ಚೀರಾಡಿ
ಸೋತು ಮಲಗಿದ ಕಂದನ ದಿಟ್ಟಿಸುವ
ತಾಯಿಯೋಡಲು ಎಣ್ಣೆ ಬರಿದಾದ
ಹಣತೆಯ ಹಾಗೆ, ಕರುಳ ಬಳ್ಳಿಯ
ಕಳ್ಳು ತುಂಬಿಸದ ಜೋತುಬಿದ್ದ
ತಾಯ ಮೊಲೆಗಳು ತನ್ನ ಕುಡಿಯ
ದಾರುಣ ಬದುಕಿನ ಕರಾಳ
ಮುನ್ನುಡಿಯ ಸಂಕೇತಗ
ಳು.

ಜೋಪಡಿಯ ಅಂಗುಲಂಗುಲ ಆವರಿಸಿದ
ಕತ್ತಲು ಕಂ
ಗಳಲಿ ಶಾಶ್ವತವಾಗಿ
ಸಮಾಧಿಯಾಗಲು ದಾರಿದ್ರ್ಯದ ಬೇಗೆಯಲಿ
ಬಳಲಿದ ಜೀವಗಳ ಹಸಿವ ನೀಗದ
ಬಡತನದ ಕಾರ್ಮೊಡವ ಸೀಳಿ
ಬಾಳಿಗೆ ಬೆಳಕಾಗದ ಬೆಳಕು ನಮಗಾಗಿ
ಜಗದೀ ಹರಿಯದೇ ದೂರಾದರೇ
ಪ್ರತಿದಿನದ ಬೈಗೂ ಅಣಕಿಸಿ ಅಸಹ್ಯವಾಗಿಹ
ಜೀತದ ಜೀಕಾಟದಿಂದ ತುಸುವಾದರೂ
ಬಿಡುವು.

ಭರವಸೆ ಮೂಡಬಾಡಿದ ಕಂಗಳ
ಎದುರಿನ
ಜಾಲಿಮರದ ತುಂಬೆಲ್ಲ
ಹರಡಿದ ಸಾವಿರ ಸಾವಿರ ಮುಳ್ಳುಗಳ
ವಾಸ್ತವ ಬೆತ್ತಲೆ ದರುಶನದ ನಡುವೆ
ಚಿಗುರೊಡೆಯುತಿಹ ಎರಡು ಹಸಿರೆಲೆ,
ಹಸಿದು ನಿದ್ದೆಯಲಿ ಜಗವ ಮರೆತ
ಕಂದನ ಮೊಗದಲಿ ಬಿಮ್ಮಗೆ
ಅರಳಿದ ಮಂದಹಾಸ, ನಿದ್ದೆಗೆ
ಜಾರುತಿಹ ತಾಯ ಕಂಗಳಲು
ಮಿರುಗುತಿಹ ಕನಸಿನ ನಕ್ಷತ್ರ ಲೋಕ.

ಎಚ್.ಎನ್.ಈಶಕುಮಾರ್.

Wednesday, March 24, 2010

ಕತ್ತಲ ಕೋಣೆಯ ಜೀವಧಾತು..















ನನ್ನ
ನಿನ್ನ ಏಕಾಂತದ ಕ್ಷಣಗಳ
ಕುರುಹು, ಕಣ್ಣ ಮುಂದಿಂದು ನಲಿದಾಡುತಿರಲು
ಮನದಲಿ ಹೂತಿದ್ದ ಯಾವುದೋ ದುಗುಡ
ಮರೆಯಾದ ನಿರಾಳ. ನನ್ನ
ನಿನ್ನಲ್ಲಿ
ಭಾವ-ಭಾವಗಳು ಮಿಂದು, ಉಸಿರು
ಬೆರೆತ ಪ್ರೇಮಾಂಕುರದ ಕೂಸೇನು ಅಲ್ಲ
ನನ್ನ ಕಂದ! ಬದುಕಿನ ನಿಷ್ಕರುಣ
ವಾಸ್ತವಕೆ ಸಾಕ್ಷಿ ನನ್ನ ಕಂದ!
ಜೀವದ ಹುಟ್ಟು 'ಕ್ರಿಯೆ'. ಕ್ರಿಯೆಗೂ
ಭಾವಕೂ ಸಂಬಂಧವೀಹಿನ ಪ್ರತಿರೂಪ
ನನ್ನ ಕಂದ!


ನೀರವ ಕತ್ತಲ ಕೋಣೆಯಲಿ ಹರವಿದ
ಹಾಸಿಗೆ
ಯ ಮೇಲೆ ಹಸಿದ ಮೈಗಳು
ಬೆವೆ
ತು, ನಾಳೆಗಳ ಮರೆತು ದಾಹವ
ಇಂಗಿಸುತಲೇ, ಬಂಜೆಯ ಬಯಲಲಿ
ಬಿತ್ತಿದೊಂದು ಬೀಜವ ಪೊರೆದ ತಾಯ ಗರ್ಭ
ನೋವ ನುಂಗಿ ಪೋಷಿಸಲೇ ಅವಳ
ಸಹಜ ಪ್ರಕೃತಿ, ನೀ ಅವಳ ಕಣ್ಣಲ್ಲಿ ಮಗುವಾಗೆ,
ಎದೆಹಾಲ ಬಸಿದೆಳೆದ ಬಾಯಲಿ
ನೀ ಒಮ್ಮೊಮ್ಮೆಯು ಅಮ್ಮ ಎನಲು
ಮರೆತಳವಳು ನಿನಗಾಗಿ ಕತ್ತಲ ಕೋಣೆಯಲಿ
ತಾನುಂಡ ನೋವುಗಳ!

Wednesday, March 10, 2010

ನೆನೆಯುತ ಮತ್ತೆ ಮತ್ತೆ...


ನೀ ಹಾಗೇ ಸುಮ್ಮನೆ
ನಡೆದು ಹೋಗಬಹುದಿತ್ತು
ಮೌನವೇ ನನ್ನ ಉತ್ತರವ
ಹುಡುಕುತಿತ್ತು, ಆದರೇ ನನ್ನ
ಪ್ರೀತಿಯ ಅನುಮಾನಿಸಿ ನೀ
ಆಡಿದ ಮಾತುಗಳು ಉಳಿದಿವೆ

ಎದೆಯಲಿ ನಿನ್ನ ನೆನೆಸುತ ಮತ್ತೆ ಮತ್ತೆ..

ಬಾನಲಿ ಸಂಜೆಯ ಸೂರ್ಯ

ಕವನ ಬರೆವ ಹೊತ್ತಿಗೆ,
ನೀ ಬಂದು ಹಾಗೇ ಕುಳಿತೆ

ನನ್ನ ಮುಂದೆ...


ನಾ ಕೇಳುತ್ತಿರಲಿಲ್ಲ,
ನೀ ಕಾರಣ ಹೇಳಬೇಕಲ್ಲ
ಇವನಿಗೆ ಎಂಬ ಕುಂಟು
ನೆಪವ ನೀನೆ ಹುಡುಕಿ
ನೆನಪಿನಾಳಕೆ ಇಳಿದೆ
ನೀ ಬಯಸಿ ಬಯಸಿ ದೂರಾದೆ...