Monday, August 31, 2009

ಪ್ರೀತಿ ಮತ್ತು ಒಂಟಿ ಹಕ್ಕಿ....







ಸಹಯಾತ್ರಿಗಳೇ 'ಕವಿತಾ ಗುಚ್ಛದ' ಕವನಗಳಿಗೆ ನಿಮ್ಮಿಂದ ಸಿಕ್ಕಿದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.ಪ್ರತಿಕ್ರಿಯಿಸಿದ ಪ್ರತಿಯೊಬ್ಬರು ಒಂದಲ್ಲ ಒಂದು ಕವಿತೆಯನ್ನ ಮೆಚ್ಚಿ ಮಾತನಾಡಿದ್ದಾರೆ. ಕವನ ಬರೆಯುವುದಕ್ಕಿಂತ ನಿಮ್ಮ ಮೆಚ್ಚುಗೆಯ,
ವಿಶ್ವಾಸದ ನುಡಿಗಳು ನೀಡುವ ಸಂತಸ ಅಪಾರ. ನಿಮ್ಮೆಲ್ಲರ ವಿಶ್ವಾಸದಿಂದ ನನ್ನ ಆತ್ಮವಿಶ್ವಾಸ ಅಧಿಕವಾಗಿ ನನ್ನ ಮತ್ತೊಂದು ಕವನವನ್ನು ನಿಮ್ಮ ಓದಿಗೆ, ಪ್ರತಿಕ್ರಿಯೆಗೆ, ವಿಮರ್ಶೆಗೆ ನೀಡುತ್ತಿದ್ದೇನೆ. ಪ್ರೀತಿಯ ನಲುಮೆಯ ಭಾವದಲಿ ಮಿಂದು ತನ್ನ ಮನದನ್ನೆಯಿಂದ ದೂರಾದ ಹಕ್ಕಿಗೆ ಕಾಡುವ ನೆನಪುಗಳು. ಆ ನೆನಪಿನಲೇ ಕಾಲದೂಡುತ 'ಪರ್ಯಟನೆಯ ಬದುಕ' ಅರಸುವ ಒಂಟಿಹಕ್ಕಿಯ ಮನದ ತುಮುಲ,ತಳಮಳಗಳು ಒಂದು ಕ್ಷಣ ನಿಮ್ಮದಾಗುವಂತೆ ಮಗ್ನರಾಗಿ....

ಪ್ರೀತಿ ಮತ್ತು ಒಂಟಿ ಹಕ್ಕಿ....

ಎಲ್ಲೋ ಬೆಟ್ಟದ ತಪ್ಪಲಿಂದ ನುಸುಳಿಬಂದ

ತಿಳಿಗಾಳಿ ಸುಯ್ಯೆಂದು ಮರೆತ ಮಧುರತೆಯ
ಮನದಲಿ ತುಳುಕಿಸಲು ಬೆಟ್ಟದ
ತುದಿಯಲಿ ಒಂಟಿಹಕ್ಕಿಗೆ ಮುಸ್ಸಂಜೆಯ
ಮಬ್ಬಿನಲಿ ತನ್ನ ಸಂಗಾತಿಯ
ಬಿಸಿಯುಸಿರಿನ ಉನ್ಮಾದದ ನೆನಪು ಕಾಡಲು
ತಂಗಾಳಿಯ ತಂಪಲು ಹಕ್ಕಿಗೆ ಕಣ್ಣಿರ ಒರತೆ.


ಬೆಚ್ಚನೆ ಭಾವದ ಮೋಹದ ಕಿಚ್ಚಲಿ
ಒಂದೇ ಗೂಡಿನ ನಂಟಿನರಮನೆಯಲಿ
ಜಗದ ಆಗು-ಹೋಗುಗಳಿಗೆ ಕದವ ಮುಚ್ಚಿ
ಉಸಿರು-ಉಸಿರಲೆ ಪ್ರೀತಿಯ ಉಂಡು
ಕಾಲವ ಮರೆತ ಹಕ್ಕಿಗಳ ನಡುವಿಂದು
"ವಿಷಾದ"
ಬರಡು ಬರಡಾದ ಎದೆಯ ಹಂದರದ
ತುಂಬೆಲ್ಲ ವಿಷಾದದಲೆಗಳು
ಸುಳಿದಾಡುತಿರಲು ಒಂಟಿಹಕ್ಕಿಗೆ
ಹಸಿರೆಲೆಗಳ ಬನವೇ ಬೆಂಗಾಡು.

ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ
ನದಿಯೊಡಲು 'ಜೀವನ'.
ಹಕ್ಕಿಗದೋ ಭಾವ-ಭಾವಗಳು ಮಿಂದು
ಜೀವಮಿಡಿದ ಸಾಂಗತ್ಯದ ಅಂತ್ಯವು.

ಮನದ ತುಂಬೆಲ್ಲ ಪ್ರೀತಿ ಪ್ರೇಮದ ಹುಚ್ಚು ಹೊಳೆಯ
ನವೋನ್ವೇಷಣೆಯ ಹಾದಿಯಲಿ ಪೇರಿಸಿಕೊಂಡ
ಸವಿನೆನಪುಗಳ ಸರಮಾಲೆ ಸಾಲದೇನು?
ಕಾಲನ ಜೋಳಿಗೆಯಲಿ ಅಳಿದುಳಿದ
ಜೀವಮಾನವ ಸವೆಸಲು ಹಕ್ಕಿಗೆ;
ಹೊರಡಲು ಪರ್ಯಟನೆಯ ಬದುಕ ದಾರಿಯಲಿ.....?
ಎಚ್.ಎನ್.ಈಶಕುಮಾರ್

Monday, August 24, 2009

ಕವಿತಾ ಗುಚ್ಛ...


ಕವಿತೆಗಳ ಓದಲು ನನಗೆ ಇನ್ನಿಲ್ಲದ ಬಯಕೆ ,ಅದರ ನವಿರುತನ, ಲಾಲಿತ್ಯ ನನ್ನನ್ನೇ ಮರೆಯುವಂತೆ ಮಾಡುತ್ತವೆ.ಕವಿತೆಯ ಕೆಲವೇ ಪದಗಳು, ಸಾಲುಗಳು ಹಿಡಿದಿಡುವ ಭಾವನೆಗಳು ಅಪಾರ.ಎರಡೇ ಸಾಲಿನ ಕವನ ಜೀವನದ ಶ್ರೇಷ್ಟತೆಯನ್ನೋ, ನಶ್ವರತೆಯನ್ನೋ, ಪ್ರೀತಿಯ ಆಗಧಾತೆಯನ್ನೋ, ಮೋಹಕವನ್ನೋ, ವಿರಹದ ಬೇಗೆಯನ್ನೂ, ಏಕಾಂಗಿಯ ಬೇಸರವನ್ನೂ, ಇನ್ನಾವುದೋ ಸಂಸಾರದ ಸಾರವನ್ನೋ ಮನವನು ತಟ್ಟುವಂತೆ ಹೇಳಿಬಿಡುತ್ತವೆ. ಅಂತಹ ಯಾವುದೇ ಕವಿಯ ಸೃಜನತೆಯ ಬಗೆಗೆ ನನಗಿನ್ನೂ ಕೌತುಕತೆ ಇದೆ.ಇಂದಿಗೂ ಯಾವುದೇ ಹಿರಿಯ-ಕಿರಿಯ ಕವಿಯ ಅಚ್ಚರಿಯ ಕವನದ ಸಾಲುಗಳನು ಓದಿದಾಗಲೂ ನನ್ನಲ್ಲಿ ಹುಟ್ಟುವ ಪ್ರಶ್ನೆ ಎಂದರೆ 'ಅಬ್ಬಾ!ಈ ಸಾಲುಗಳು ಆ ಕವಿಮನಸಿಗೆ ಹೇಗೆ ಒಲಿದವು ಎಂದು'.ಕವಿಯ ತಪಕ್ಕೆ ಒಲಿವ ವರದಾನ ಕವನ, ಮಗ್ನತೆ ಇದ್ದಾಗ ಮಾತ್ರ ಭಾವದಲೆಗಳು ಸೊಗಸಾಗಿ ಮೂಡುವವು.ಸುಮ್ಮ ಸುಮ್ಮನೆ ಜಾಳು ಜಾಳಗಿ ಬರೆದರೆ ಕವನವಾಗುವುದಿಲ್ಲ ಎಂಬುದು ನನ್ನ ನಂಬಿಕೆ. "ಕಪ್ಪೆ ಚಿಪ್ಪಿನಲ್ಲಿ ಅವಿತು ಮುತ್ತಾಗುವ ಹಾಗೇ ಸ್ವಾತಿಯ ಮಳೆ ಹನಿ...ಬಳ್ಳಿಯಲಿ ಮೊಗ್ಗಾಗಿ ತಾನಾಗಿ ಅರಳುವ ಹೂವಿನಂತೆ, ಸುಂದರವಾದ ಮನದ ಪದ ಗುಚ್ಛವು ಕವಿತೆಯು".
ನನ್ನ ಕೆಲವು ಕವಿತಾ ಗುಚ್ಛಗಳನು ನಿಮ್ಮ ಓದಿಗೆ,ಪ್ರತಿಕ್ರಿಯೆಗೆ ಹಾಕಿದ್ದೇನೆ, ಓದಿ ಆನಂದಿಸಿ ಹಾಗೇ ನಿಮ್ಮ ಮಾತುಗಳು ನನ್ನ ಎಚ್ಚರಿಸಲಿ ಸ್ನೇಹಿತರೆ..ಓದಲು ಅಣಿಯಾಗಿ..

ಕವಿತಾ ಗುಚ್ಛ.

ಅರಿಯದೆ ಆದ ಪ್ರಮಾದಕೆ ಮನ
ಬಿರಿಯುವ ಮೌನವೇಕೆ?ತೊರೆದು ಹೋಗಿಬಿಡು
ಅಳಿಸಿಹಾಕಿ ಮನದ ಹೂ ಹಾಸಿನ ಮೇಲಿನ
ನೆನಪಿನ ಮಧುವ,ಇಲ್ಲವೇ ಒಮ್ಮೆ ಮರೆತುಬಿಡು
ಆದ ಪ್ರಮಾದವ ಉಳಿಸಿಬಿಡುವೆ ಜೀವಮಾನ
ನಿನ್ನ ಹಸಿ ಹಸಿ ಆರದ ಪ್ರೀತಿಯಲಿ....ಗೆಳತಿ.

ಮಳೆಯಲಿ ನೆನೆವ ಆ ರೋಮಾಂಚನದಲಿ
ಸಿಂಗಾರಗೊಂಡು ಮೆದುವಾಗಲು ಇಳೆ
ನಿನ್ನ ಕಾಲ ಹೂ ಸ್ಪರ್ಶಕೆ ಗಡಿಬಿಡಿಯ
ಚಿತ್ತಾರ ಮೂಡಲು ನನ್ನ ಮನದಲಿ
ಹುಚ್ಚೆದ್ದ ನವಿಲ ವಯ್ಯಾರವು.

ನಿನ್ನೆಡೆಗೆ ಸೆಳೆವ ಹುಚ್ಚು ಮೋಹವನು
ಮನದಲೆ ತಣಿಸಲೇ ಸೋತು, ಹರಿಯಲು
ಬಿಟ್ಟ ಹುಚ್ಚು ಹೊಳೆಯಲಿ ಕೊಚ್ಚಿ ಹೋದವಲ್ಲೇ
ನನ್ನ ಹರೆಯದ ದಿನಗಳು. ಈಗಲೂ ಕೆಟ್ಟ
ನೆನಪಲೆ ನನ್ನ ಜೀವ ಜೀಕಾಟ...ಒಲವು
ಸುಂಕ ಕಟ್ಟೆಯೇ ಅಲ್ಲವೇ?

ಅವನ ಕೈಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ
ಪ್ರೇಮ ಪಕ್ಷಿಯ ಮುಕ್ತವಾಗಿಸುವ
ಹುಂಬ ತವಕದಲಿ ಹಾರಿಬಿಟ್ಟ
ಹಕ್ಕಿಯ ಸ್ವಚ್ಚಂದ ಹಾರಾಟವನು
ಆನಂದಿಸಲಾಗದೆ ವಿರಹದ ಬೇಗೆಯಲಿ
ಬಳಲಿದನಂತೆ ಅಮರ ಪ್ರೇಮ ತ್ಯಾಗಿ.

ಆ ಕಂಗಳಲಿ ನೀ ಸುರಿವ ಸುಧೆಯ
ಹರಸುತ ಎಷ್ಟು ವರುಷಗಳು ಸರಿದರು ಸರಿಯೇ
ಸರಿದು ಹೋಗಲಿ ಜೀವಮಾನವು ಕ್ಷಣಮಾತ್ರದಲಿ
ಗೆಳತಿ! ಸುಧೆಯ ಆ ಅಮಲಿನಲಿ ಮುಳುಗಿಸಿಬಿಡು
ನನ್ನ ಬೇಡುವೆನು, ದಯಪಾಲಿಸು
ನಿನ್ನ ಅಮಲಿನಲಿ ನನ್ನ ಸಾವನ್ನ!


Wednesday, August 19, 2009

ಇಟ್ ಯಾಪೆನ್ಸ್ ಓನ್ಲಿ ಇನ್ ಇಂಡಿಯಾ...







"ಯಾರು ಹೆದರೋದು ಬೇಡ,ನಮ್ಮ ರಾಜ್ಯದಲ್ಲಿ ಇನ್ನು ಸೋಂಕು ಜಾಸ್ತಿ ಹರಡಿಲ್ಲ, ನಮ್ಮಲ್ಲಿ ಸತ್ತವರ ಸಂಖ್ಯೆ ಕಡಿಮೆ,ನಾನು ಬಳ್ಳಾರಿಯಿಂದಲೇ ದಿನವೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ, ನಮ್ಮಲ್ಲಿ ಯಾವ ತೊಂದರೆಯೂ ಆಗೋಲ್ಲ, ಸರ್ಕಾರ ಅದಕ್ಕೆ ಬೇಕಾದ ರೀತಿಯಲ್ಲಿ ಜನರಿಗೆ ನೆರವು ನೀಡುತ್ತದೆ"
ಹೀಗೆ ರಾಜ್ಯದ ಆರೋಗ್ಯ ಮಂತ್ರಿ ಹೇಳಿದ್ದನ್ನೇ ಹೇಳುತ್ತ,H1N1 ತಡೆಗೆ ತಾನು ಕೈಗೊಂಡ ಒಂದೇ ಒಂದು ಕ್ರಮದ ಬಗ್ಗೆಯೂ ಸರಿಯಾದ ವಿವರಣೆ ನೀಡದೆ ರಾಜಕಾರಣಿಗಳು ಹೇಳುವ ಮಾಮೂಲು ಶೈಲಿಯಲ್ಲೇ,ಮಾತನಾಡುತ ಉದಾಸೀನತೆಯ ಪರಾಕಾಷ್ಟೆ ಮೆರೆಯುವ ಇಂತವರನ್ನ ನೋಡಿದರೆ ಇವೆಲ್ಲ ನಡೆಯೋದು ಭಾರತದಲಿ ಮಾತ್ರವೇನೋ ಅನಿಸುತ್ತದೆ ನನಗೆ.ಹೇಳಿಕೊಳ್ಳಲು ಮಾತ್ರ ನಮ್ಮದು ಪ್ರಪಂಚದ ಸರ್ವಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಆದರೇ ಅದರ ಒಳಗಿರುವುದೆಲ್ಲ ಟೊಳ್ಳು ಭರವಸೆಗಳ ಜಾಡು.ಕೆಟ್ಟ ರಾಜಕೀಯ ವ್ಯವಸ್ಥೆ ದೇಶದ ಎಲ್ಲ ಆಯಾಮಗಳನು ತನ್ನ ಭದ್ರಬಾಹುವಿನೊಂದಿಗೆ ಹಾಳುಗೆಡುವುತ್ತಲೇ ಸಾಗುತ್ತಿದೆ.ಜನ ನಾವುಗಳು ಮಾತ್ರ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ ಎಚ್ಚರದಲ್ಲೂ ಪ್ರಜ್ಞಾಹೀನರಂತೆ ಇದಾವುದು ನಮಗೆ ಸಂಭಂದಿಸಿದ ವಿಷಯವಲ್ಲ ಎಂದು ಜಾಣಕುರುಡುತನ ಪ್ರದರ್ಶಿಸುತ, ಸ್ವಕಾರ್ಯದಲಿ ಮುಳುಗಿ ಹೋಗಿದ್ದೇವೆ.


ನಮ್ಮ ಜನಗಳಿಂದ ಚುನಾಯಿತವಾದ ಸರ್ಕಾರ ಅರ್ಥಾತ್ ಈ ಜನಪ್ರತಿನಿಧಿಗಳಿಗೆ,ಸಾಮಾಜಿಕ ಜವಬ್ದಾರಿ ಎಂಬುದು ಏನು? ಸಾಮಾಜಿಕ ಕಾಳಜಿ ಎಂದರೆ ತಿಳಿದಿದೆಯೇ ನಿಮಗೆ ಮಹಾನುಭಾವರೇ? ಎಂದು ಮೊದಲು ಕೇಳಿ ತಿಳಿಯಬೇಕು.ಅವರ ಪ್ರಕಾರ ಸಮಾಜದಲ್ಲಿ ಸಮಸ್ಯೆಗಳು ಇದ್ದೆ ಇರುತ್ತವೆ,ಸಮಾಜಕ್ಕೆ ಸಮಸ್ಯೆಗಳ ಬರವೇ? ಅವುಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬಸ್ವಭಾವದ,ದಪ್ಪ ಚರ್ಮದ ರಾಜಕಾರಣಿ,ಮಂತ್ರಿ ಮಹೋದಯರಿಗೆಂದು ತಿಳಿಯದು ಜನ ಸಾಮಾನ್ಯನ ಕಷ್ಟ ಕಾರ್ಪಣ್ಯಗಳು.ರಾಜ್ಯದ ಒಬ್ಬ ಆರೋಗ್ಯ ಮಂತ್ರಿ "ನಮ್ಮ ರಾಜ್ಯದಲ್ಲಿ ಇನ್ನು ಹೆಚ್ಚು ಜನ ಸತ್ತಿಲ್ಲ,ಪಕ್ಕದ ಪುಣೆಯಲ್ಲಿ ಹರಡಿರೋವಷ್ಟು ತೀವ್ರವಾಗಿ ರೋಗ ನಮ್ಮ ರಾಜ್ಯದಲ್ಲಿ ಹರಡಿಲ್ಲ"ಅಂದರೆ ಜನರೆಲ್ಲ ರೋಗದಿಂದ ನರಳಿ ಸಾಯಬೇಕು,ಇವರು ಸಾಂಕ್ರಾಮಿಕ ರೋಗವನ್ನು ತಡೆಯುವ ಕ್ರಮ ಕೈಗೊಳ್ಳಲು ಅನ್ನೋದು ಇವರ ಮಾತಿನ ಅರ್ಥವೇನೋ,ಸುಮ್ಮ ಸುಮ್ಮನೆ ಮುಂಜಾಗ್ರತ ಕ್ರಮ ಕೈಗೊಂಡು ರೋಗ ಹರಡದಿದ್ದರೆ ಅವರ ಶ್ರಮವೆಲ್ಲ ವ್ಯರ್ಥವಾಗುತ್ತೆ,ಅನ್ನೋದು ಮಂತ್ರಿಗಳ ಯೋಚನೆ ಇರಬೇಕು.ಅವರ ಬುದ್ದಿವಂತಿಕೆಯನ್ನ ಮೆಚ್ಚಲೇ ಬೇಕು ಬಿಡಿ.


ನಾವು ರೋಗ ನಿಯಂತ್ರಿಸಲು ಎಷ್ಟು ಸಾದ್ಯವೋ ಅಷ್ಟು ಮುಂಜಾಗ್ರತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ ಎಂದು H1N1 ರೋಗದ ಬಗ್ಗೆ ಭಾಷಣ ಮುಂದುವರಿಸುತ್ತಲೇ 'ಅಗತ್ಯವಿರುವ ಹೆಚ್ಚುವರಿ ಸಿಬ್ಬಂಧಿಯನ್ನು ನೇಮಿಸಿಕೊಳ್ಳಲು ಕ್ರಮ ಜರುಗಿಸಲಾಗುವುದು, ಕೇಂದ್ರದಿಂದಲೂ ಇನ್ನು ಹೆಚ್ಚಿನ ಔಷಧ ಸವಲತ್ತನ್ನು ಪಡೆಯಲಾಗುವುದು'.ಎಂಬ ಆರಿಕೆಯ ಉತ್ತರಗಳನ್ನು ನೀಡುತ್ತಲೇ ಸಾಗುವವನು ನಮ್ಮ ಘನ ಸರ್ಕಾರದ ಆರೋಗ್ಯ ಮಂತ್ರಿಯೂ,ಅವನ ಕಾರ್ಯ ವೈಕರಿಯೂ ಅದ್ಭುತವಾದುದ್ದೆ ಅಲ್ಲವೇ.


ನೂರಾರು ಸಾಮನ್ಯ ಜನರು H1N1 ರೋಗದಿಂದ ಸತ್ತರೆ ಮಾತ್ರ ಅದನ್ನು ತಡೆಯುವ ಗಂಭೀರ ಕ್ರಮ ಜರುಗಿಸೋದು, ಒಬ್ಬ ಸತ್ತರೆ ಪಾಪ!ಅದು ಸಾವಲ್ಲ.ಹೇಳಿಕೊಳ್ಳಲು ಸಂಖ್ಯೆಯು ಅಲ್ಲ.ಲಕ್ಷ,ಸಾವಿರಗಟ್ಟಲೆ ವೋಟ್ ಬ್ಯಾಂಕಿನ ರೀತಿ ಸಾವು ಸಹ ಸಂಖ್ಯಾ ಬಲವನ್ನು ಪ್ರದರ್ಶಿಸಿದರೆ ಮಾತ್ರ ಅವರಿಗೆ ಅರಿವಾಗುವುದು,ರೋಗ ಯಾಗೆ ತೀವ್ರ ತರವಾಗಿ ಸಾಮನ್ಯ ಜನರ ಜೀವವನ್ನು ಬಲಿತೆದುಕೊಳ್ಳುತ್ತಿದೆ ಎಂದು.ಇಲ್ಲವಾದರೇ ಮಂತ್ರಿಗಳ ಪ್ರಕಾರ ಸಮಾಜದಲ್ಲಿ ಇವೆಲ್ಲ ಮಾಮೂಲು ಘಟನೆ.ಸಾಮನ್ಯನೊಬ್ಬನ 'ನೋವು''ಸಾವು' ಅದರ ವೇದನೆ ಎಲ್ಲ ಅವರಿಗೆ ಹೇಗೆ ತಿಳಿಯಬೇಕು.ಅವರೇನು 'ಸಾಮನ್ಯಜೀವೆಗಳೇ' ಅವೆಲ್ಲ ಅವರಿಗೆ ಅರ್ಥವಾಗೋಕೆ, ಅಸಮಾನ್ಯರು ಅವರು "ರಾಜ್ಯದ ಮಂತ್ರಿಗಳು"ಪ್ರಜೆಯಲ್ಲ, ಪ್ರಜೆಯಾಗಿದ್ದರೆ ಅವರೇಕೆ ಹೀಗೆ ವರ್ತಿಸುತ್ತಿದ್ದರು.ಅವರನ್ನು ದೂಷಿಸುವುದು ಸರಿಯಲ್ಲ ನಮ್ಮದೇ ತಪ್ಪು,ನಮ್ಮ ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳದೆ,ರಾಜ್ಯದ ಆರೋಗ್ಯ ಮಂತ್ರಿಗಳನು ದೂಷಿಸುವುದು ಯಾವ ನ್ಯಾಯ ಅಲ್ಲವೇ? ಸಾಮಾನ್ಯರು ನಾವುಗಳು ನಮ್ಮ ಇತಿ-ಮಿತಿಗಳನು ಅರಿತು ಮಾತನಾಡುವುದ ಕಲಿಯಬೇಕು ಮೊದಲು.



ಬಾಬ ಆಮ್ಟೆಯಂಥ ಮಹಾನ್ ಜೀವಿಗಳು ಬೀದಿಯಲಿ ಬಿದ್ದು ನರಳಾಡುತ್ತಿದ್ದ 'ಕುಷ್ಟ ರೋಗಿಯ'ವೇದನೆಯನ್ನು ಕಂಡು,ಅಂದಿನಿಂದಲೇ ತನ್ನ ಜೀವಮಾನವಿಡಿ ಕುಷ್ಟರೋಗಿಗಳ 'ಕಲ್ಯಾಣಕ್ಕಾಗಿಯೇ' ದುಡಿದು,ಪರರ ಸೇವೆಯೇ ದೇವರ ಕಾರ್ಯವೆಂಬಂತೆ ಬದುಕಿ ಸಾವಿರಾರು ನಿರ್ದಯಿ,ನಿರ್ಗತಿಕರಿಗೆ ಸ್ವಾವಲಂಬನೆಯ ಬದುಕ ದಾರಿ ತೋರಿಸಿ,"ಆನಂದವನ"ಎಂಬ ಸ್ವಯಂ ಸೇವಾ ಶಿಬಿರವನು ಕಟ್ಟಿ ಬೆಳಸಿ,ಅಲ್ಲಿ ಬಂದ ವಿಕಲಚೇತನರೆಲ್ಲ ಸ್ವಾಭಿಮಾನಿಗಳಾಗಿ ಬದುಕುವಂತೆ,ಸಾವಿರಾರು ಅನಾಥರಿಗೆ ಪೋಷಕರಾಗಿ ಅವರ ಬಾಳನು ಹಸನಾಗಿಸಿ,ಕೊನೆಯವರೆಗೂ ತನ್ನಲ್ಲಿಗೆ ಬಂದವರ ನೋವಿಗೆ ಸ್ಪಂಧಿಸಿದ ಜೀವಾತ್ಮರಿದ್ದ ನಾಡಿನಲ್ಲಿ ಇಂತಹ 'ಆರೋಗ್ಯ ಮಂತ್ರಿ' ಇದ್ದಾರೆ ಎಂಬುದು ಇಂದಿನ ವಾಸ್ತವದ ವಿಪರ್ಯಾಸವಷ್ಟೆ.


ಅವರುತಾನೇ ಏನ ಮಾಡಿಯಾರು ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾರೆ,ಅದು ಅಲ್ಲದೆ ಬಳ್ಳಾರಿಯ ಕೋಟ್ಯಾಂತರ ರೂಪಾಯಿಯ ಅವರ ವ್ಯವಹಾರವ ಬಿಟ್ಟು ಇಲ್ಲಿ ಯಾರೋ ಒಬ್ಬ ಸಾಮಾನ್ಯನ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ.ಹಾಗಾಗಿ ಸಾಮಾನ್ಯರೇ ನೀವುಗಳೇ ಸ್ವಲ್ಪ ಸಹಿಸಿಕೊಂಡು,ಅವರೊಂದಿಗೆ ಸಹಕರಿಸಿ ಅನ್ನೋದು ನಾನೊಬ್ಬ ಭವ್ಯ ಭಾರತದ ಮತದಾರನಾಗಿ ನಿಮ್ಮಲ್ಲಿ ಮಾಡುವ ವಿಜ್ಞಾಪನೆ.

Friday, August 14, 2009

ತೀರವು ನಾ...





ತೀರವು ನಾ...

ನದಿಯೊಡಲ ವಿಕ್ಷಿಪ್ತ
ನಿನ್ನ ಅಂತರಾಳವು
ನಿಗೂಡ ಒಡಲಿಂದ
ಚಿಮ್ಮಿ ಬರುವ
ಒಲವಿನ ಅಲೆಯ
ಜೀವಸ್ಪರ್ಷದಲಿ
ರೋಮಾಂಚನವಾಗುತಿಹ
ತೀರವು ನಾ.....


ಅಪರಿಮಿತ

ಅಲೆಗಳ ಬಡಿತದಲಿ
ನದಿಯೊಡಲ
ತುಮುಲವರಿವ ತವಕದಲಿ
ಮೂಡಿದ ಅವಿನಾಭಾವ
ಸಂಭಂದದಲಿ
ಪುಳಕಿತವಾಗುತಿಹ
ತೀರವು ನಾ....


ನನಗೇಕೆ ಹೀಗನಿಸುತ್ತದೆ ಎಂಬುದನ್ನು ನಾನೇ ಪುನಃ ಪುನಃ ಪ್ರಶ್ನಿಸಿಕೊಂಡು ಉತ್ತರ ಹುಡುಕಲು ಪ್ರಯತ್ನಿಸಿದ್ದೇನೆ. ಆದರೇ ಉತ್ತರ ಸಿಗದೇ ಮತ್ತೆ ಮತ್ತೆ ಅದೇ ಗೊಂದಲಕ್ಕೆ,ಜಿಗ್ಜ್ಞಾಸೆಗೆ ಒಳಗಾಗಿದ್ದೇನೆ, ಆಗುತ್ತಲೇ ಇದ್ದೇನೆ . ಅದೇನೋ ತಿಳಿಯದು ನನಗಂತು ಪ್ರೇಮ, ಪ್ರೀತಿ, ವಿರಹ,ಏಕಾಂಗಿತನದ ತೀವ್ರ ತರವಾದ ಯಾವ ಅನುಭವ ಇಲ್ಲದೇ ಕೇವಲ ಕಲ್ಪನೆಯ ವಿಹಂಗಮ ಲೋಕದಲಿ ಹಕ್ಕಿಯ ಸ್ವಚಂದತೆಯಲಿ ಮೂಡಿಬರುವ ಪದಲಾಲಿತ್ಯದಲಿ ಇಂತಹ ಕವನಗಳ ಬರೆದು ಬಿಡುತ್ತೇನೆ.ಯಾವಾಗಲೋ ತುಂಬಾ ದಿನಗಳ ಹಿಂದೇ ಬರೆದ, ಪ್ರೇಮ ಕವನದಂತಿರುವ ಈ ಪುಟ್ಟ ಕವನ ಕಣ್ಣಿಗೆ ಬಿದ್ದಿತ್ತು, ಹಾಗೇ ಕಣ್ಣಾಡಿಸಲು,ಕಲ್ಪನೆಯಲಿ ಅವಳ ಮನದಲಿನ ಭಾವಗಳ,ವಿಕ್ಷಿಪ್ತತೆಗಳ ತಾಕಲಾಟಗಳನು ನದಿಯ ಅಂತರಾಳದ ತಳಮಳಕ್ಕೆ ಹೋಲಿಸಿ ಒಂದು ರೂಪಕವಾಗಿ, ಹೆಣ್ಣಿನ ಮನವನು ಕವನದಲಿ ಏಕೆ ಚಿತ್ರಿಸಿದೇ ಎಂದು ನಾನೇ ಮತ್ತೆ ಮರು ಪ್ರಶ್ನಿಸಿಕೊಂಡರೆ ಉತ್ತರ ಸಿಗದಾಯಿತು.ಇಂತಹ ಪ್ರತಿಮಾ ರೂಪಕಗಳು ನಿಮ್ಮನ್ನು ಕಾಡಿರುವುದು ಸಾಮಾನ್ಯ ಅಲ್ಲವೇ, ಆಗಾಗ್ಗಿ ಕವನವ ಓದಿ ನಿಮ್ಮ ಅನಿಸಿಕೆಯನ್ನ ಬರೆಯಿರಿ,ನನ್ನ ನಿಮ್ಮ ಮನದ ತಾಕಲಾಟಗಳನು ಒಮ್ಮೆ ಒಂದು ಸಪಾಟಿನಲ್ಲಿಟ್ಟು ಪರಾಮರ್ಶಿಸೋಣ ಸ್ನೇಹಿತರೆ.

Sunday, August 9, 2009

ಸತ್ಯ ಮಾರಾಟಕ್ಕಿದೆ ಕೊಂಡುಕೊಳ್ಳಿ..


ನಿನ್ನ ಗಂಡನೊಂದಿಗೆ ದಾಂಪತ್ಯದ ಸಖಿಗೀತವನು ಅನ್ಯೋನ್ಯವಾಗಿ ಮದುವೆಯಾದಾಗಿನಿಂದ ಹಾಡುತಲಿದ್ದರು, ಒಮ್ಮೆಯಾದರೂ ಪರಪುರುಷನ ಸಾಂಗತ್ಯದ ಸುಖವನು ನೀನು ಬಯಸಿಲ್ಲವೇ? ಅಯ್ಯೋ! ಶಿವನೆ ಇವನಿಗೆನಾಯಿತು ಎಂದು ಗಾಬರಿಯಾಗಬೇಡಿ,ಎದುರಿಗೆ ಕೂತವಳ ಕಣ್ಣಲ್ಲೆ ಕಣ್ಣಿಟ್ಟು ಪ್ರಶ್ನೆ ಕೇಳಿದವನಿಗೆ ಎದ್ದು ಒದೆಯಲಿಲ್ಲ ಅಷ್ಟೆ.ದಂಗುಬಡಿದಂತಾಗಿ ಏನು ಹೇಳಬೇಕೋ ತಿಳಿಯದೆ ಸುಮ್ಮನೆ ಮೌನಕೆ ಶರಣಾದಳು. ಇಂತಹ ಪ್ರಶ್ನೆಗಳ ಕಾರಣಕ್ಕಾಗಿಯೇ ಇತ್ತೀಚಿಗೆ ವಿವಾದಕ್ಕೆ ಈಡಾಗಿರುವ ಸ್ಟಾರ್ ವಾಹಿನಿಯು 'ಸಚ್ ಕಾ ಸಾಮ್ನ' ಕಾರ್ಯಕ್ರಮದಲಿ ಕೇಳುವ ಪ್ರಶ್ನೆಯ ಪರಿ ಇದು.

ಇಂತಹ ವಿಭಿನ್ನ ಕಾರ್ಯಕ್ರಮಗಳನು ರೂಪಿಸುತ ಆಧುನಿಕತೆಯ ಅರ್ಥಹೀನ ನಾವಿನ್ಯತೆಯನು ಮೆರೆಯುವ ಅಮೇರಿಕಾದ ಒಂದು ರಿಯಾಲಿಟಿ ಷೋನ ಹಿಂದಿ ಅವತರಣಿಕೆಯೇ 'ಸಚ್ ಕಾ ಸಾಮ್ನ'.ಸತ್ಯವೇ ಜೀವನ ದರ್ಶನ ಎಂದ ಭಾರತೀಯರ ಸತ್ಯಕ್ಕಿಂದು 'ಮಾರುಕಟ್ಟೆ ಸಿಕ್ಕಿದೆ'.ನಮ್ಮೊಳಗಿನ ಸತ್ಯವನು ಮಾರ್ಕೆಟಿಂಗ್ ಮಾಡಿ ಹಣ ಮಾಡುವ ಸಾವಕಾಶ ನಮ್ಮನ್ನರಸಿ ಬಂದಿದೆ. ನಮ್ಮಯ ಸತ್ಯ ಪರತೆಯು ಜಾಗತಿಕ ಮಾರುಕಟ್ಟೆಯಲಿ ಬಿಕರಿಗಿರುವ ವಸ್ತುವಾಗಿರುವುದು, ವಿಪರ್ಯಾಸವೋ? ವಿಚಿತ್ರವೋ? ಸಂತಸದ ಸಂಗತಿಯೋ ನನಗಂತು ತಿಳಿಯದಾಗಿದೆ.

ಮಾನವನ ಭಾಷ ಸಾಮರ್ಥ್ಯದ ನಿಲುಕುಗಳ ಬಗ್ಗೆಯೇ ಸೋಜಿಗವೆನಿಸುವುದು.ಇಂದಿನ ಪರಮ ಪಾಪಿಗಳ ಲೋಕದಲ್ಲಿ ನಿಷ್ಠಾವಂತ ಮುಕ್ತ ಮನಸಿನ ಸಾಧುವು ಸಹ ತನ್ನ ತೀರ ಖಾಸಗಿ ಎನಿಸುವ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನು ಜಗಕೆ ತಿಲಿಸಲಿಚ್ಚಿಸುವುದಿಲ್ಲ.ಪ್ರತಿಯೊಬ್ಬನು ತನ್ನಯ ಒಂದಾದರೂ ವ್ಯಕ್ತಿತ್ವವನು ಸಾರ್ವಜನಿಕ ದೃಷ್ಟಿಯಿಂದ ದೂರವಿರಿಸುತ್ತಾನೆ.ಮಾತಿನ ಚತುರತೆಯಲ್ಲೇ ಆ ದ್ವಂದ್ವತೆಯ ಸಂಕಿರ್ಣತೆಯನ್ನು ಜೀವನವಿಡಿ ನಿಭಾಯಿಸಿಕೊಂಡು ಕಾಪಾಡಿಕೊಳ್ಳಬಲ್ಲ ಚತುರನಿಗಿಂದು ಸತ್ಯವನು ಹೇಳುವುದೇ ಒಂದು ಸಾವಲು.

ಅರೇ ಸತ್ಯವನು ಹೇಳೋದು ಅಷ್ಟು ಕಷ್ಟವೇ,ಎಂತಹ ಹೀನಾಯ ಸ್ಥಿತಿಗೆ ತಲುಪಿದೆವು ನಾವೆಲ್ಲಾ ಅನ್ನೋ ಮರುಕ ಹುಟ್ಟುವ ಸಂಧಿಗ್ಧತೆಯಲಿದ್ದೇವೆ ನಾವೆಲ್ಲಾ. ತನ್ನ ಮನದ ಉಗ್ರಾಣದಲಿ ಅವಿತಿರುವ ಕಳ್ಳಸತ್ಯವನು ಸಾರ್ವಜನಿಕಗೊಳಿಸಲು ಇಂದು ಎದೆಯಲಿ ಕಲ್ಲಿನಂತ ಗುಂಡಿಗೆಯೇ ಇರಬೇಕು.ಪ್ರತಿ ಸತ್ಯಕು ಮಾರುಕಟ್ಟೆಯಲಿ ಮೌಲ್ಯವಿರುವುದರಿಂದ,ಸತ್ಯ, ವಸ್ತುನಿಷ್ಟವಾಗಿರಬೇಕು,ಜಗಕಲ್ಲ ಅಲ್ಲಿ ಕಾರ್ಯಕ್ರಮದಲಿ ಅಳವಡಿಸಿರುವ ತಂತ್ರಜ್ಞಾನಕೆ.ಏಕೆಂದರೆ ನಿಮ್ಮ ಉತ್ತರದಲ್ಲಿ ಅಡಗಿರುವ ಸತ್ಯ ಸುಳ್ಳುಗಳ ಪಾರಮರ್ಶೆ ಇಲ್ಲಿ ನಿಮ್ಮ ಅಂತರಾತ್ಮ,ದೇವರುಗಳ ಮೆಲೆ ಅವಲಂಬಿತವಾಗಿಲ್ಲ ಬದಲಿಗೆ ನಿಮಗೆ ಅಳವಡಿಸಿದ ತಂತ್ರತೆ ಮೇಲಿದೆ. ಯಂತ್ರ ಅನುಮೊದಿಸಿದರಷ್ಟೇ ನಿಮ್ಮ ಮಾತು ಸತ್ಯವಾಗುವುದು, ಇಲ್ಲವಾದಲ್ಲಿ ನೀವು ಹೇಳಿದ ಸತ್ಯವು ಸುಳ್ಳೇ. ಹಣ ಬೇಕಾದರೆ ಯಂತ್ರ ಸರಿ ಎನುವ ಸತ್ಯ ಹೇಳಬೇಕಾಗಿದೆ. ಕಾರಣ ಇದು;

"ಸತ್ಯ ಮೇವ ಜಯತೆಯ ಕಾಲವಲ್ಲ,
ಸತ್ಯ ಮಾರುವ ಜನತೆಯ ಕಾಲ".

ನಾನು ಸತ್ಯವನ್ನೇ ಹೇಳುತ್ತೇನೆ,ಸತ್ಯವನಲ್ಲದೆ ಬೇರೇನನ್ನು ಹೇಳುವುದಿಲ್ಲ .......ನಗು ಬಂದರೆ ನಕ್ಕು ಸುಮ್ಮನಾಗಿಬಿಡಿ.

ನನ್ನ-ನಿನ್ನ ನಡುವಿನ(ಅರ್ಧ)ಸತ್ಯ

ದಿಟ್ಟಿಸುವ ಕಣ್ಣಿನಲ್ಲಿನ ಸೂಜಿಮನೆಯ
ಹರಿತಕೆ ಮನದಲೇನೋ ದಡಗುಡಿಸಿ
ಮುಚ್ಚಿದ ಕಣ್ಣರೆಪ್ಪೆಗೆ ಅರಿವಾಗಿ ಪ್ರಶ್ನೆಯ
ಮೊನಚು ಮರೆಮಾಚಿಸಲೊಮ್ಮೆ
ಸುತ್ತಲಿನ 'ಬೆಳಕ'
ಒಳಗಿನ ಅಳುಕು, ಕಣ್ಣ ಭಾಷೆಯಲು
ಹರಿಯದಿರಲಿ ರೆಪ್ಪೆಯ ಎಲ್ಲೇ ಮೀರಿ
ಎಂಬ ಮತಿಯ ಲೆಕ್ಕಚಾರವನು
ಗುಣಿಸುವಲಿ ಸೋತು ಕಂಗಳಲಿ
ಹೊಮ್ಮುವ ತೆರೆ
'ಅರ್ಧಸತ್ಯ'.


ಇದು ರಾಮ,ಕೃಷ್ಣರ ಧರ್ಮ ಸೆರೆಯಲ್ಲ
ಹರಿಶ್ಚಂದ್ರನ ಸತ್ಯ ಪರಿಪಾಲನ ಪ್ರಜ್ಞಾವಿಧಿಯಲ್ಲ
ಗಾಂಧೀ,ಪರಮಹಂಸರ ಸತ್ಯಾನ್ವೇಷಣೆಯ
ಪರಿಯೂ ಅಲ್ಲ, ಸತ್ಯವೇ ನಮ್ಮ ತಂದೆ-ತಾಯಿ
ಎಂದ ಪುಣ್ಯಕೋಟಿಯ ನೀವೆದನೆಯಲ್ಲ,
ಇದು ನನ್ನ-ನಿನ್ನ, ಆತ್ಮ-ಪರಮಾತ್ಮನ ನಡುವಿನ
ಬಿಂದುವಿನಂತರ
"ಸತ್ಯವೇ".
ಎಚ್.ಎನ್.ಈಶಕುಮಾರ್.