Friday, October 23, 2009

ನಗೆಯಲ್ಲೊಂದು ಚೈತ್ರಧಾರೆ..

ಸೃಷ್ಟಿಯ ವಿಶೇಷವೇ ಹೊಸತನ, ಹೊಸತನದ ಬೆರಗು. ಯಾವುದೇ ಹೊಸತು ಸೂಜಿಗಲ್ಲಿನಂತೆ ನಮ್ಮನ್ನು ಸೆಳೆಯುವುದು. ಸೃಷ್ಟಿಯಲಿನ ನವೀನತೆಯ ಅನುಭವವೇ ಅಮೋಘ. ಅದರಲ್ಲೂ ಮಗುವಿನ ಹುಟ್ಟಿನ ಆ ದಿವ್ಯತೆಯ ನವ್ಯವಂತು ಅನುಭಾವವೇ ನಮಗೆ. ಹುಟ್ಟಿನಿಂದ ಇಲ್ಲಿಯವರೆಗೆ, ಹುಟ್ಟಿದ ದಿನವೇ ಯಾವುದೇ ಮಗುವನ್ನು ನೋಡದಿದ್ದ ನನಗೆ ನನ್ನ ಅಕ್ಕನ ಹುಟ್ಟಿದ ಮಗುವನ್ನು ಕಂಡ ಕ್ಷಣವೇ ನನಗನಿಸಿದ್ದು 'ನಾನು ಸಹ ಹೀಗೆ ಇದ್ದೇನೆ'. ಒಂಭತ್ತು ತಿಂಗಳು ತಾಯ ಗರ್ಭದಲ್ಲಿ ಕಲೆತು,ಜಗಕೆ ಬಂದ ದಿನದಿಂದಲ್ಲೇ ಶೂನ್ಯ ನೋಟವ ಬೀರುತ ಎಲ್ಲವ ಕಂಡು ಬೆರಗಾಗುತ್ತಿದ್ದೇನ. ನಾವೆಲ್ಲ ಆ ಹಂತದಿಂದಲೇ ಬೆಳೆದು ಹೀಗೆ ಆಗಿದ್ದೆವೆಯೇ ಎಂದು ತುಲನಾತ್ಮಕವಾಗಿ ಕಲ್ಪಿಸಿಕೊಳ್ಳಲು ಆಗುವುದೇ ಇಲ್ಲ. ಅದೇನೇ ಇದ್ದರು ಹುಟ್ಟಿನ ಆ ದಿವ್ಯತೆ, ಹಾಲುಗೆನ್ನೆ, ಹೂ ಮೈಯ ಬೆತ್ತಲೆ ಸೌಂದರ್ಯ, ಭಾವದ ಲೇಪವಿರದ ಕಂದನ ಆ ನಗು-ಅಳು ಎಲ್ಲವು ನನ್ನಲ್ಲಿ ಸೃಷ್ಟಿಸಿದ ಬೆರಗಿನ ಅನುಭವದ ಭಾವಹಂದರವೇ ಈ ಕವನ.

ಸೃಷ್ಟಿಯೇ!!


ಆ ನಗುವಿನಲ್ಲೊಂದು ಚೈತ್ರಧಾರೆ
ಹೊಸ ಬಗೆಯ ನವನೀತ ಚೆಲುವಿನಂದದ
ಸೊಬಗ ಬುಗ್ಗೆ ಚಿಮ್ಮಲು ಪ್ರತಿ ನಗೆಯಲು,
ಕಂಡ ಕಂಗಳಿಗಿನ್ನಾವ ಹರ್ಷಧಾರೆಯ
ಹೊನಲು ಸುರಿಯಬೇಕು ಸೃಷ್ಟಿಯೇ!

ಯಾವ ನಗುವದು? ಚೆಲುವು-ನಲಿವಿನ,
ಸಂತಸ-ಸಂಭ್ರಮದ ಆನಂದದ ಚಿಲುಮೆಯೆ
ರಾಗ-ದ್ವೇಷ,ಭಾವಗಳ ಗೊಜಲಿಲ್ಲದ,
ಆ ನಗೆಗಾವ ಹೆಸರಿಲ್ಲದ, ಮುಗ್ದವೆನಲು
ಜಗವೇ ಅರಿವಿಗೆ ಬಾರದ ಆ ಮೊದಮೊದಲ
ನಗು ಬರಿಯ ನಗುವಷ್ಟೇ ಸೃಷ್ಟಿಯೇ!
ನಿನ್ನಂತೆ ಭವಭಾರದ ಅಂಟಿಲ್ಲ
ಮೊಗಮೊಗದಲು ನಗೆ ಹೊಮ್ಮಿಸುವ ಆ ನಗೆಗೆ.

ಜೀವ-ಜೀವಗಳ ಸಂಭಂದ ಬೆಸೆದ
ಭಾವ-ಭಾವಗಳೋಲುಮೆಯ ಬಿಸಿಯುಸಿರ
ಬಸಿರು ನವಪಲ್ಲವ ಕಲೆತು ತಾಯ ಒಡಲಲಿ
ಹೂಮೈಯ ರೂಪ ತಾಳಿ,ಹಸಿಮೈಯ
ಚೆಲುವಲೇ ಧರೆಗೆ ಜಾರಿ ನಲಿವ
ನಗೆಯ ಹೊಂಬಣ್ಣಕೆ ನೀ ಮಾತ್ರ
ಸಾಟಿಯು ಸೃಷ್ಟಿಯೇ!
ಎಚ್.ಎನ್.ಈಶಕುಮಾರ್

Friday, October 16, 2009

ಒಲವ ದೀಪಾವಳಿ...







ಸಹಯಾತ್ರಿಗಳೇ ನಿಮಗೆಲ್ಲರಿಗೂ ಒಲವ ಹಬ್ಬ ದೀಪಾವಳಿಯ ಶುಭಾಶಯಗಳು...ಬೆಳಗಲಿ ಪ್ರೀತಿಯ ದೀವಿಗೆ ನಮ್ಮ ನಿಮ್ಮ ಬಾಳಲಿ..




ಒಲವ ಹಣತೆ
ಬೆಳಗೀತು ಮನವ,

ಬೆಳಗೀತು ಜಗವ
ಹರುಷದ ಹೊನಲಲಿ..
ಗೆಳತಿ ಹಚ್ಚೋಣ ಬಾ
ಒಲವ ಹಣತೆ
ನಮ್ಮ ನಮ್ಮ
ಮನದ ದೀವಿಗೆಯಲಿ..

ಜೀವ ಜೀವಕೆ ನಗುವಿನ
ಹೊನಲ ಹರಸಿ, ಹರಿಸಿ
ಜೀವನ ಪ್ರೇಮದ ಸುಳಿಯಲಿ
ಬದುಕಿನ ಪ್ರತಿ ಕ್ಷಣಗಳು ಬೆಳಗಲಿ,
ಒಲವ ದೀಪಿಕೆ ಮನೆ ಮನೆಗೂ
ಮನಕೂ ಹಬ್ಬಲಿ, ಹರಡಲಿ..

ಎಚ್.ಎನ್.ಈಶಕುಮಾರ್

Thursday, October 8, 2009

ಸರಳತೆಯ ಆದರ್ಶವೇ ಜೀವನ ಅವರಿಗೆ..


ಯಾವನು ತಾನೇ ನೆಟ್ಟ, ನೇರವಾಗಿ ಇದ್ದಾನೆ ಹೇಳಿ? ಹೇಳೋದೊಂದು ಮಾಡೋದು ಒಂದು, ಯಾರನ್ನು ನಂಬೋಕೆ ಆಗಲ್ಲ ಅಂತ ಕಾಲ ಕಣಪ್ಪ ಇದು. ಈ ತರದ ಲೋಕರೂಡಿಯ ಮಾತುಗಳನ್ನು ಎಲ್ಲರು ಆಗಾಗ ಕೇಳುತ್ತಲೆ ಇರುತ್ತೇವೆ. ಸುಖಾ ಸುಮ್ಮನೆ ಯಾರನ್ನು ನೇರವಾಗಿ ದೂಷಿಸದೆ, ಹೊಣೆಗಾರನನ್ನಾಗಿ ಮಾಡದೆ ಸಾಮನ್ಯನಾಡುವ ಮಾತಿನಲಿ ಅಡಗಿರುವ ' ಸಾರ್ವತ್ರಿಕ ಸತ್ಯದ' ಬಗ್ಗೆ ಕ್ಷಣ ಕಾಲ ಯೋಚಿಸಿ.
ನಮ್ಮೆಲ್ಲ ತತ್ವಗಳು, ಧರ್ಮಗ್ರಂಥಗಳು, ದೇವರು-ದಿಂಡರು, ನಮ್ಮ ಕಾನೂನು, ಸಂವಿಧಾನ, ಭಗವದ್ಗೀತೆ ಹೀಗೆ ಎಲ್ಲವು ನಮಗೆ ತಿಳಿಸುವ ನೀತಿ ಎಂದರೆ "ನುಡಿದಂತೆ ನಡೆಯಬೇಕು". 'ಮಾತು-ಕೃತಿ' ಗಳ ನಡುವೆ ಸಾಮ್ಯತೆಯನು ಕಾಪಾಡಿಕೊಳ್ಳುವ ಗುರುತರವಾದ ನೀತಿ ಪಾಠವನ್ನು ಹೇಳುತ್ತವೆ. ಹೇಳುವುದೇನೋ ಸರಿ ಯಾರಿಗೆ ಹೇಳುತ್ತವೆ ಅನ್ನುವುದೇ ಪ್ರಶ್ನೆ. ಆ ತತ್ವವನು ಪಾಲಿಸುವವರು ಯಾರು? ಪಾಲಿಸಬೇಕಾದರು ಯಾರು? ನಾನೋ, ನೀವುಗಳೋ, ರಾಜಕಾರಣಿಗಳೋ, ಸರ್ಕಾರಿ ನೌಕರರೋ,ಗುರು-ಹಿರಿಯರೋ ಯಾರು ನುಡಿದಂತೆ ನಡೆಯಬೇಕು ಎಂಬುದನ್ನು ಜನಗಳಿಗೆ ತಿಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿರುವುದು ಎಂಥ ವಿಪರ್ಯಾಸ ಅಲ್ಲವೇ.
ಎಲ್ಲಿಂದ ಹೇಗೆ ಯಾವ ರೀತಿ ನೋಡಿದರು ನಮ್ಮ ದೇಶದಲ್ಲಿ 'ರಾಜಕೀಯ'ಎಂಬುದು ನಮ್ಮ ಸಮಾಜದಲಿ ಹಾಸು ಹೊಕ್ಕಾಗಿದೆ. ರಾಜಕೀಯವಿಲ್ಲದೆ ಏನು ನಡೆಯುವುದಿಲ್ಲ ಎನುವಂತ ಸ್ಥಿತಿ ನಮ್ಮದು. "politics is the last resort for scoundrels" ಎಂದ ಇಂಗ್ಲೆಂಡ್ ನ ಮಹಾನ್ ಚಿಂತಕ, ನಾಟಕಕಾರ ಜಾರ್ಜಬರ್ನಾರ್ಡ್ ಷ. ಆ ಮಾತುಗಳೇನೋ ತ್ರಿಕಾಲ ಸತ್ಯವೇ ಸರಿ. ಕಾರಣ ನಮ್ಮ ಸಮಾಜದಲಿನ ಬಹಳ ಮಂದಿ ರಾಜಕೀಯ ವ್ಯಕ್ತಿಗಳು ಸಹ ಅದಕ್ಕೆ ತಕ್ಕಂತೆ ಇದ್ದಾರೆ ಮತ್ತು ಹಾಗೆಯೇ ವರ್ತಿಸುತ್ತಾರೆ. ಮೊದಲೆಲ್ಲ ಯಾಗೆ ಅಪ್ಪಟ್ಟವಾದ ನಿಜಗುಣವಿದ್ದರೂ ರಾಡಿಯಾದ ರಾಜಕೀಯ ಕ್ಷೇತ್ರ ಎಲ್ಲರನು ಆಪೋಷಿಸುತ ಭ್ರಷ್ಟ-ದುಷ್ಟರಾಗುವಂತೆ ತನ್ನ ತ್ರಿವಿಕ್ರಮ ಅಟ್ಟಹಾಸವನು ಮೆರೆಯುತ್ತಲೆ ಇದೆ.
ಇಂದಿನ ನಮ್ಮ ನಾಯಕರನೊಮ್ಮೆ ಹಿಂದಿನ ಸ್ವಾತಂತ್ರ್ಯ ಕಾಲದ, ಸ್ವಾತಂತ್ರ್ಯ ಪೂರ್ವದ ಜನನಾಯಕ ರೊಂದಿಗೆ ಹಾಗೇ ಸುಮ್ಮನೆ ಹೋಲಿಸಿ ನೋಡಿ, ಯಾರಾದರು ಒಬ್ಬ ರಾಜಕಾರಣಿ ನಮಗಿಂದು, ಅನುಕರಣಿಯನಾಗಿದ್ದಾನ ಎಂಬುದನ್ನು ಪರಿಗಣಿಸಿ ನೋಡಿ ನಿಮಗೆ ಉತ್ತರ ದೊರೆವುದು. "ಸರಳತೆಯೇ ಅಗರ್ಭವಾದ ಸಿರಿವಂತಿಕೆ" ಎನುವ ಮಾತಿದೆ. ಗಾಂಧಿಜಿ ಒಮ್ಮೆ 'ಉಪ್ಪಿನ ಸತ್ಯಾಗ್ರಹಕ್ಕೆ' ಕರೆಕೊಟ್ಟು ಚಳುವಳಿಗೆ ಹೊರಟರೆಂದರೆ ಹಿಂದೆ-ಮುಂದೆ ಯೋಚಿಸದೆ ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸುತ್ತಿದ್ದರು. ಅವರ ಮಾರ್ಗದರ್ಶನದಲಾಗಲಿ, ಆದರ್ಶದಲಾಗಲಿ ಯಾರಿಗೂ ಎಳ್ಳಷ್ಟು ಅನುಮಾನಗಳಿರಲಿಲ್ಲ. ಅಲ್ಲದೆ ಎಂತಹ ಸಾಮಾನ್ಯನೇ ಆದರೂ 'ಗಾಂಧೀಜಿಯ ತತ್ವಗಳನು' ಆಶಾದಾಯಕವಾಗಿ ಯಾವುದೇ ಗೊಂದಲಕೆ ಒಳಗಾಗದೆ ಪಾಲಿಸುತಲಿದ್ದರು ಹಾಗೂ ಪಾಲಿಸಲು ಕಾರಣವೆಂದರೆ ಅವರ 'ಸರಳತನ'.
ಗಾಂಧಿಜಿಯವರ ಜೀವನವೇ "ಸರಳಾತಿಸರಳ" ಅಂತಹ ಜೀವನವನ್ನು ಪಾಲಿಸಲು ಎಲ್ಲರು ಯೋಗ್ಯರೆ. ಸಿರಿವಂತರೆ ಅಲ್ಲ ದೇಶದ ಕಡು ಬಡವನು ಗಾಂಧೀಜಿಯ ದಿನಚರಿಯಂತೆ ತನ್ನ ಜೀವನ ನಡೆಸಬಹುದಲ್ಲವೆ. ಗಾಂಧೀಜಿ ಸೂಟು,ಬೂಟು ಧರಿಸಿ ಜನರನ್ನು ಆಕರ್ಷಿಸಲಿಲ್ಲ, ಅವರ ಸರಳತೆ, ಮಾದರಿಯುತ ಜೀವನ, ಆದರ್ಶಮಯವಾದ ಬದುಕು ಜನರನ್ನು ಅವರತ್ತ ಸೆಳೆಯಿತು. ಹಾಗೆಯೇ ದೇಶದ ಪ್ರಧಾನಿಯಾಗಿದ್ದಾಗಲೇ ತೀರಿಕೊಂಡ ಲಾಲ್ ಬಹದ್ದೂರ್ ಶಾಸ್ರಿಗಳಿಗೆ ಅವರು ತೀರಿಕೊಂಡ ಸಮಯದಲಿ 4.600 ರೂಪಾಯಿಗಳಷ್ಟು ಬ್ಯಾಂಕ್ ನ ಸಾಲವಿತ್ತೆಂದು ಇಂದು ಹೇಳಿದರೆ ನಂಬೋಕೆ ಸಾಧ್ಯವೇ ಎನಿಸುವಷ್ಟು ಅನುಮಾನ ಮೂಡುತ್ತದೆ.
ಅಂತಹ ಮಹಾನ್ ನಾಯಕರೆಲ್ಲ ಮರೆಯಾಗಿ, ಪುಸ್ತಕದ ಹಚ್ಚಿನಲ್ಲಿ ಕಾಣ ಸಿಗುವ ಈ ಸಮಯದಲಿ ಅವರೆಲ್ಲ ನೆನಪಾಗಲು ಕಾರಣವಾದದ್ದು ನಮ್ಮ ಪ್ರಾಥಮಿಕ ಶಿಕ್ಷಣಮಂತ್ರಿ ಕಾಗೇರಿಯ ಹೆಣ್ಣು ಮಕ್ಕಳಿಬ್ಬರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಪತ್ರಿಕೆಯ ವರದಿ ಓದಿ, ಈ ಕಾಲದಲ್ಲಿ ಹೀಗೂ ಉಂಟೆ? ಎನುವ ಹಾಗೆ ದಿಗಿಲಾಗುವುದಷ್ಟೇ ಉಳಿದಿತ್ತು. ಅದೇನೇ ಇರಲಿ ತಮ್ಮದೇ ಸರ್ಕಾರದ ಆಡಳಿತದ ಬಗ್ಗೆ ಅದರ ಮಂತ್ರಿಗಳಿಗೆ, ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನಂಬಿಕೆ ಇಲ್ಲದ ಈ ವಿಚಿತ್ರ ಸಂಧಿಗ್ದ ಕಾಲದಲಿ ಅಂತ ಸಚಿವರ ಮಕ್ಕಳು ಸರ್ಕಾರಿ ಶಾಲೆಯಲಿ ಕಲಿಯುತ್ತಿದ್ದಾರೆ ಎನುವುದು ಪ್ರಶಂಸೆ ಪಡುವಂತ ವಿಷಯವೇ. "ಸಾಮಾನ್ಯನಲಿ ಸಾಮಾನ್ಯನಾಗುವ ಆ ಅನುಭವವೇ ಅಭೂತವಾದುದು"
ಬದಲಾವಣೆಯ ಹಾದಿಯಲಿ ಕ್ಷಿಪ್ರ ಬೆಳವಣಿಗೆಯ ಕನಸು ಕಾಣುವ ಪ್ರತಿಯೊಬ್ಬರು ತಾನೇ ಬದಲಾವಣೆಯ ಹರಿಕಾರನಾಗಿ, ತನ್ನ ಜೀವನವನೆ ಪರೀಕ್ಷೆಗೆ ಒಳಪಡಿಸುತ್ತ, ಇತರರಿಗೆ ಮಾದರಿಯಾದಾಗಲೇ ಅಲ್ಲವೇ ' ಬದಲಾವಣೆಗೊಂಡು ಅರ್ಥ,ಮಹತ್ವ ಸಿಗೋದು ಸಹಯಾತ್ರಿಗಳೇ'.

Thursday, October 1, 2009

ಬಯಲಲಿ ಬಯಲಾಗುತ...














ಬಯಲಲಿ ಬಯಲಾಗುತ...
ನಮ್ಮ ಹಮ್ಮು-ಬಿಮ್ಮುಗಳ ವಸ್ತ್ರ ಕಳಚಿ, ಸರಳತೆಯ,ನಿರಂಹಕಾರದ
ಬಟ್ಟೆತೊಟ್ಟು,ಎಲ್ಲರಲ್ಲೋಬ್ಬರಾಗುತ ಬಯಲಲಿ ಬಯಲಾಗುವ ಸವಿಯ ರಸಧಾರೆಯ ಪಡೆಯುವ ನಾವೆಲ್ಲ.....


ಹನಿ ಹನಿಯಾಗಿ ಬಿದ್ದ ಮಳೆಯ
ಮೋಹಕ ಚುಂಬನಕೆ ಬಯಲಾಗುತ
ಧರೆ, ತನ್ನೊಡಲ ಹಸಿವನೊಮ್ಮೆಗೆ
ನೀಗಿಕೊಳ್ಳುತ್ತ ಉಸಿರಾಡುವ ಕಣ ಕಣಕೂ
ತಾಯ ಗರ್ಭವ ಧಾರೆ ಎರೆದು
ಹಸಿ ಹಸಿರ ಚೆಲುವ ರಾಶಿ ನಳ ನಳಿಸೆ
ಬಯಲಾಂತ ಬಯಲ ತುಂಬೆಲ್ಲ
ಹನಿ ಹನಿಯಲು ಅಡಗಿ ಪ್ರೀತಿ
ಚಿಗುರಾಗಿ,ಎಲೆಯಾಗಿ, ಹೂವಾಗಿ ಹಬ್ಬಲು,
ಆ ಜಗದ ಸಿರಿಗೆ ಸೋಲುವ ಪ್ರತಿ ಎದೆಯಲು
ಲವಲೇಶ ಪ್ರೀತಿ ಅಂಕುರಿಸಿ ಬೆಳಗಲೋ!
ಬಯಲು ಅವರೆದೆಯ ಪ್ರೀತಿ ಬಯಲು.

ತನ್ನ ಒಡಲಲಿ ಕನಸ ಬುತ್ತಿಯ ಹೊತ್ತು
ಬರಡಾದ ಬಯಲಲಿ ಬಿತ್ತು, ಒಲವ
ರಸಧಾರೆಯ ಹರಿಸಿ ಹರಿವ ನದಿಯ
ಉನ್ಮಾದ ಕಲರವ, ಹಳವಳಿಸಿ ನಲಿವ
ಪೈರಿನ ಪಚ್ಹ ಹಸಿರಲಿ ಚಿಮ್ಮುತಿಹ
ಪ್ರೀತಿ, ಕುಡಿಯೊಡೆದು ಅರಳಿ ನಗಲಿ
ನಲಿವು ಬಯಲು ಬಯಲಲಿ
ಎಲ್ಲರೆದೆಯಲಿ ಬಚ್ಚಿಟ್ಟ ಕನಸು
ಬಯಲು ಬಯಲಲಿ ಬಯಲಾಗಲಿ....
..............ಎಚ್.ಎನ್.ಈಶಕುಮಾರ್